
ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟಿಗೆ ಭಾರತೀಯ ತಂಡವನ್ನು ಇಂದು ಬಿಸಿಸಿಐ ಪ್ರಕಟಿಸಿದೆ. 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದ ಮೆಂಟರ್ ಆಗಿ ಆಯ್ಕೆ ಮಾಡಲಾಗಿದೆ.
ಈ ವರ್ಷದ ಅಕ್ಟೊಬರ್ 17 ರಿಂದ ಟಿ20 ವಿಶ್ವಕಪ್ ಪಂದ್ಯಗಳು ಆರಂಭವಾಗಲಿದ್ದು ನವೆಂಬರ್ 14ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿಯ ವಿಶ್ವಕಪ್ ಒಮನ್, ಅಬುದಾಬಿ, ದುಬೈಗಳಲ್ಲಿ ನಡೆಯಲಿದೆ.
ಇಂದು ಆಯ್ಕೆಯಾದ ಭಾರತದ 15 ಸದಸ್ಯರ ಪಟ್ಟಿ ಹೀಗಿದೆ. ನಾಯಕನಾಗಿ ವಿರಾಟ್ ಕೊಹ್ಲಿ ಉಪನಾಯಕನಾಗಿ ರೋಹಿತ್ ಶರ್ಮಾ ಇದ್ದರೆ, ಆರಂಭಿಕನಾಗಿ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ , ಭುವನೇಶ್ವರ್ ಕುಮಾರ್, ಮೊಹ್ಮದ್ ಶಮಿ ಆಯ್ಕೆಯಾದವರ ಪಟ್ಟಿಯಲ್ಲಿ ಇದ್ದಾರೆ.
ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಹಾಗು ದೀಪಕ್ ಚಾಹರ್ ಅವರನ್ನು ಹೆಚ್ಚುವರಿ ಆಟಗಾರರಾಗಿ ಆಯ್ಕೆ ಮಾಡಿದ್ದು ಅಧಿಕೃತ 15 ಮಂದಿಯಲ್ಲಿ ಯಾರಾದರೂ ಗಾಯಾಳಾಗಿ ಹೊರ ಬಿದ್ದರೆ ಈ ಮೂವರಲ್ಲಿ ಓರ್ವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಟಿ20 ಸ್ಪೆಷಲಿಸ್ಟ್ ಬೌಲರ್ ಯಜುವೇಂದ್ರ ಚಾಹಲ್ ವಿಶ್ವಕಪ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ರವಿಚಂದ್ರನ್ ಅಶ್ವಿನ್ ಪ್ರಮುಖ ಸ್ಪಿನ್ನರ್ ಆಗಿ ತಂಡದಲ್ಲಿ ಜಾಗ ಪಡೆದಿದ್ದಾರೆ.
ಭಾರತದ ಯಶಸ್ವೀ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದ ಮೆಂಟರ್ ಆಗಿ ಆಯ್ಕೆ ಮಾಡಲಾಗಿದ್ದು, ಇವರು ತಂಡದ ಜತೆ ಇರಲಿದ್ದಾರೆ. ಐಸಿಸಿ ಟ್ರೋಫಿಗಳಲ್ಲಿ ಯಶಸ್ವೀ ಎನಿಸಿರುವ ಧೋನಿಯ ಮಾರ್ಗದರ್ಶನವನ್ನು ಭಾರತ ತಂಡ ಪಡೆಯಲಿದೆ.