
ಆಂಟಿಗುವಾ: ಇಲ್ಲಿನ ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಐಸಿಸಿ ಅಂಡರ್-19 ವಿಶ್ವಕಪ್ 2022ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತವು ಹಾಲಿ ಚಾಂಪಿಯನ್ ಬಾಂಗ್ಲಾದೇಶವನ್ನು 5 ವಿಕೆಟುಗಳಿಂದ ಮಣಿಸಿ ಕೂಟದ ಸೆಮಿ ಫೈನಲ್ ಪ್ರವೇಶಿಸಿದೆ. ಬಿಗಿಯಾದ ಬೌಲಿಂಗ್ ಧಾಳಿ ಹಾಗು ಆರಂಭಿಕ ಆಂಗ್ಕ್ರಿಶ್ ರಘುವಂಶಿ ಅವರ ಅಮೋಘ 44 ರನ್ನುಗಳು ಭಾರತದ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿತು .
ಬ್ಯಾಟಿಂಗ್ಗೆ ಕಷ್ಟಕರವಾದ ಪಿಚ್ಚಿನಲ್ಲಿ ಟಾಸ್ ಗೆದ್ದ ಭಾರತದ ನಾಯಕ ಯಶ್ ಧುಲ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡರು. ನಾಯಕ ನಿರ್ಧಾರ ಸರಿ ಎಂಬಂತೆ ಬೌಲಿಂಗ್ ಮಾಡಿದ ಭಾರತೀಯ ಬೌಲರುಗಳು ಬಾಂಗ್ಲಾವನ್ನು ಹೇಳ ಹೆಸರಿಲ್ಲದಂತೆ ಕಟ್ಟಿ ಹಾಕಿದರು. ರವಿ ಕುಮಾರ್ ಅವರು ಐದು ಓವರ್ಗಳ ಸ್ಪೆಲ್ನಲ್ಲಿ ಮೂರು ವಿಕೆಟ್ ಕಿತ್ತು ಬಾಂಗ್ಲಾದೇಶವನ್ನು ಚೇತರಿಸಿಕೊಳ್ಳದಂತೆ ಮಾಡಿದರು. ಎಡಗೈ ಸ್ಪಿನ್ನರ್ ವಿಕ್ಕಿ ಓಸ್ಟ್ವಾಲ್ ಒಂದೇ ಓವರ್ನಲ್ಲಿ ಎರಡು ವಿಕೆಟ್ಗಳನ್ನು ಉಡಾಯಿಸಿದ್ದು ಬಾಂಗ್ಲಾ ತತ್ತರಿಸುವಂತೆ ಮಾಡಿತು. ಆಗ ಬಾಂಗ್ಲಾ ಸ್ಕೋರ್ 15.4 ಓವರ್ಗಳಲ್ಲಿ 37/5.
ಇನ್ನೇನು ನೂರು ರನ್ನುಗಳ ಒಳಗೆ ಆಲೌಟ್ ಆಗುವ ಅಪಾಯವನ್ನು ಮೈಮೇಲೆ ತಂದುಕೊಂಡಿದ್ದ ಬಾಂಗ್ಲಾ ತಂಡಕ್ಕೆ ಎಸ್ಎಂ ಮೆಹೆರೋಬ್ ಮತ್ತು ಆಶಿಕುರ್ ರೆಹಮಾನ್ ನೆರವಾದರು. ಇವರಿಬ್ಬರ ಮಧ್ಯೆ ಎಂಟನೇ ವಿಕೆಟ್ಗೆ 50 ರನ್ ಪಾಲುದಾರಿಕೆ ನಡೆಯಿತು. ಇದರಿಂದ ಸ್ಕೋರ್ 100 ರ ಗಡಿ ದಾಟುವಂತಾಯಿತು. ಕೊನೆಗೆ 37.1 ಓವರ್ಗಳಲ್ಲಿ 111 ರನ್ಗಳಿಗೆ ಸರ್ವಪತನ ಕಂಡ ಬಾಂಗ್ಲಾ ಭಾರತದ ಗೆಲುವಿಗೆ 112 ರನ್ನುಗಳ ಗುರಿ ನೀಡಿತು.
ಭಾರತ 30.5 ಓವರ್ಗಳಲ್ಲಿ ಐದು ವಿಕೆಟ್ಗಳ ನಷ್ಟಕ್ಕೆ 112 ರನ್ಗಳ ಗುರಿಯನ್ನು ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿತು. ಸೆಮಿ ಫೈನಲಿನಲ್ಲಿ ಭಾರತ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.