
ಉಡುಪಿ ಕೃಷ್ಣ ಮಠದ ರಥಬೀದಿಯಲ್ಲಿ ಓಡಾಡಿದ್ದ ಉಗ್ರ ಶಾರಿಕ್ ಓಡಾಟ: ಪೊಲೀಸರಿಂದ ಸಿಸಿಟಿವಿ ಪರಿಶೀಲನೆ
ಉಡುಪಿ: ಉಡುಪಿ ಕೃಷ್ಣ ಮಠದ ರಥಬೀದಿ ಸುತ್ತಮುತ್ತ ಮಂಗಳೂರು ಬಾಂಬ್ ಸ್ಫೋಟದ ಆರೋಪಿ ಇಸ್ಲಾಂ ಮತಾಂಧ ಭಯೋತ್ಪಾದಕ ಶಾರೀಕ್ ಅಕ್ಟೋಬರ್ನಲ್ಲಿ ಬಂದಿದ್ದ ಬಗ್ಗೆ ಮಂಗಳೂರಿನ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಶನಿವಾರ ರಥಬೀದಿಯ ವಿವಿಧೆಡೆ ಪರಿಶೀಲನೆ ನಡೆಸಿದ್ದಾರೆ.
ಉಗ್ರ ಶಾರೀಕ್ನ ಮೊಬೈಲ್ ಪರಿಶೀಲಿಸಿದ ಸಂದರ್ಭ ಉಡುಪಿ ರಥಬೀದಿಯಿಂದ ಮೊಬೈಲ್ ಕರೆ ಮಾಡಿರುವುದು ತಿಳಿದುಬಂದಿದೆ. ಆ ಆಧಾರದ ಮೇಲೆ ಪೊಲೀಸರು ರಥಬೀದಿಗೆ ಆಗಮಿಸಿ, ಕೃಷ್ಣ ಮಠ ಆತನ ಗುರಿ ಆಗಿತ್ತೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ರಥಬೀದಿ ಸುತ್ತಲಿನ ಅಂಗಡಿಗಳಲ್ಲಿರುವ ಸಿಸಿ ಕೆಮರಾಗಳನ್ನು ಪರಿಶೀಲಿಸಿ ಫೂಟೇಜ್ ಸಂಗ್ರಹಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠ ಸಮೀಪ ಬಂದಿದ್ದ ಶಾರಿಕ್ ಅಲ್ಲಿಂದ ಆತ ಮಣಿಪಾಲ ಮಾರ್ಗವಾಗಿ ಕಾರ್ಕಳಕ್ಕೆ ತೆರಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ರಥಬೀದಿ ಪರಿಸರದಲ್ಲಿರುವ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಶಾರಿಕ್ ಮೊಬೈಲ್ ಪಡೆದು ಯಾರಿಗೋ ಕರೆ ಮಾಡಿರುವುದು ತಿಳಿದು ಬಂದಿದೆ. ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆಕೆಯು ತನ್ನ ಮೊಮ್ಮಗನಿಗೆ ಕರೆ ಮಾಡಿರುವುದಾಗಿ ತಿಳಿಸಿದ್ದಾಳೆ. ಆಕೆ ಯಾರೇ ಸಿಕ್ಕರೂ ಅವರಿಂದ ಮೊಬೈಲ್ ಪಡೆದು ಮೊಮ್ಮಗನಿಗೆ ಕರೆ ಮಾಡುವುದು ಅಭ್ಯಾಸವಾಗಿದೆ ಎನ್ನಲಾಗಿದೆ. ಅದೇ ಅಭ್ಯಾಸದಿಂದ ಆಕೆ ಶಾರೀಕ್ನ ಮೊಬೈಲ್ನಿಂದಲೂ ಕರೆ ಮಾಡಿರಬಹುದು ಎಂದು ತಿಳಿದು ಬಂದಿದೆ.












































