ಚಿಕ್ಕಮಗಳೂರು (ಡಿ.27): ಕಿಡಿಗೇಡಿಗಳ ಗುಂಪೊಂದು ರಸ್ತೆ ಬದಿಯಲ್ಲಿದ್ದ ದರ್ಗಾ ಹಾನಿಗೆ ಯತ್ನಿಸಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂತವೇರಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ತರೀಕೆರೆ ರಾಜ್ಯ ಹೆದ್ದಾರಿ ಬದಿಯ ದರ್ಗಾದ ಬಳಿ ಭದ್ರಾವತಿ ತಾಲೂಕಿನಿಂದ ಸುಮಾರು 25 ಬೈಕ್ ಗಳಲ್ಲಿ ಆಗಮಿಸಿದ್ದ ದತ್ತಮಾಲಾಧಾರಿಗಳು ದರ್ಗಾದ ಬಳಿ ಬೈಕ್ ನಿಲ್ಲಿಸಿಕೊಂಡು ಜೈಶ್ರೀರಾಮ್ ಘೋಷಣೆ ಕೂಗುತ್ತ ಗೊಂದಲ ಸೃಷ್ಟಿಸಿದ್ದಾರೆ. ಈ ವೇಳೆ ದರ್ಗಾದ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ದತ್ತಮಾಲಾಧಾರಿ ಗಳನ್ನು ಮುಂದೆ ಹೋಗುವಂತೆ ತಿಳಿಸಿದ್ದಾರೆ. ಪೊಲೀಸರ ಸೂಚನೆ ಧಿಕ್ಕರಿಸಿದ ದತ್ತಮಾಲಾಧಾರಿಗಳು ದರ್ಗಾದ ಬಳಿ ಹುಚ್ಚಾಟ ಮೆರೆದಿದ್ದಾರೆ. ದರ್ಗಾದ ಒಳಗೆ ನುಗ್ಗಲು ಯತ್ನಿಸಿದರೆಂದು ಹೇಳಲಾಗಿದ್ದು, ಸ್ಥಳೀಯ ಮುಸ್ಲಿಂ ಸಮುದಾಯದವರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಬರುತ್ತಿದ್ದಂತೆ ದತ್ತಮಾಲಾಧಾರಿಗಳು ಬೈಕ್ ಏರಿ ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ.