
ಕಾಬೂಲ್ : ತಾಲಿಬಾನ್ ಕಾಬೂಲನ್ನು ಆಕ್ರಮಿಸಿಕೊಂಡ ಬಳಿಕ ಇಲ್ಲಿಯವರೆಗೆ ಒಟ್ಟು 400 ಮಂದಿಯನ್ನು ಭಾರತಕ್ಕೆ ಏರ್ ಲಿಫ್ಟ್ ಮಾಡಲಾಗಿದೆ. ಅವರಲ್ಲಿ 329 ಭಾರತೀಯರು, ಇಬ್ಬರು ಅಫ್ಘಾನ್ ಶಾಸಕರು ಹಾಗು ಅಫ್ಘಾನ್ ಪ್ರಜೆಗಳು ಸೇರಿದ್ದಾರೆ.
ಇಂದು 107 ಭಾರತೀಯರು, 23 ಮಂದಿ ಅಫ್ಘಾನಿ ಹಿಂದೂಗಳು ಹಾಗು ಸಿಖ್ಖರನ್ನು ಭಾರತೀಯ ವಾಯುಸೇನೆಯ ಸಿ-17 ಮಿಲಿಟರಿ ವಿಮಾನದಲ್ಲಿ ಕಾಬೂಲಿನಿಂದ ಏರ್ ಲಿಫ್ಟ್ ಮಾಡಿ ದೆಹಲಿಯ ಹಿಂಡನ್ ವಾಯುನೆಲೆಗೆ ಕರೆತರಲಾಯಿತು. ಮತ್ತೊಂದೆಡೆ 87 ಮಂದಿ ಭಾರತೀಯರು ಹಾಗು ಇಬ್ಬರು ನೇಪಾಳಿಗಳನ್ನು ದುಶಾಂಬೆಯಿಂದ ದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಕರೆತರಲಾಯಿತು.
ಈ ಹಿಂದೆ ಕಾಬೂಲಿನಿಂದ ಕತಾರ್ ನ ದೋಹಕ್ಕೆ ಸ್ಥಳಾಂತರಿಸಲ್ಪಟ್ಟಿದ್ದ 135 ಭಾರತೀಯರನ್ನು ದೋಹದಿಂದ ದೆಹಲಿಗೆ ಕರೆತರಲಾಗಿದೆ. ಭಾರತವು ಅಮೇರಿಕ, ಕತಾರ್, ತಜಕಿಸ್ತಾನ್ ಮುಂತಾದ ಸ್ನೇಹಿತ ದೇಶಗಳೊಡನೆ ಸೇರಿ ಏರ್ ಲಿಫ್ಟ್ ಕಾರ್ಯಾಚರಣೆ ನಡೆಸುತ್ತಿದೆ.
ಇಂದು ಭಾರತ ತಲುಪಿದವರಲ್ಲಿ ಅಫ್ಘಾನ್ ಶಾಸಕರಾದ ಅನಾರ್ಕಲಿ ಹೋಯ್ನಾರ್ ಮತ್ತು ನರೇಂದ್ರ ಸಿಂಗ್ ಖಾಲ್ಸ ಅವರ ಕುಟುಂಬಗಳು ಸೇರಿದ್ದವು.












































