
ಬೆಂಗಳೂರು: ಪ್ರವಾಸಿಗರ ಸೋಗಿನಲ್ಲಿ ಬಂದು ಕುಕ್ಕೆ ಸುಬ್ರಮಣ್ಯ ದೇಗುಲಕ್ಕೆ ಬಂದ ಭಕ್ತಾದಿಗಳ ಆಭರಣಗಳನ್ನು ಕದ್ದ ಕಳ್ಳಿಯೊಬ್ಬಳನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಯಶವಂತಪುರ ಪೊಲೀಸರು ಆಂಧ್ರಪ್ರದೇಶ ಮೂಲದ ಕಳ್ಳಿಯನ್ನು ಬಂಧಿಸಿದ್ದು ಆಕೆಯಿಂದ ಬರೋಬ್ಬರಿ 20 ಲಕ್ಷ ರೂಪಾಯಿ ಮೌಲ್ಯದ ಸುಮಾರು 439 ಗ್ರಾಮ್ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಕೆ ತಾನು ಕದ್ದ ಚಿನ್ನಾಭರಣಗಳನ್ನು ಬೆಂಗಳೂರಿನ ಚಿನ್ನದ ಅಂಗಡಿಯೊಂದರಲ್ಲಿ ಮರಳು ಯತ್ನಿಸುತ್ತಿದ್ದಳು.
ಈಕೆಯ ಜತೆ ಇನ್ನೋರ್ವ ಜತೆಗಾರ ಇದ್ದ ಬಗ್ಗೆ ತಿಳಿದುಬಂದಿದ್ದು ಆತನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಈ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಮಾಹಿತಿ ನೀಡಿದರು.
ಜನಜಂಗುಳಿಯಿರುವ ದೇಗುಲಗಳೇ ಈಕೆಯ ಟಾರ್ಗೆಟ್ ಎನ್ನಲಾಗಿದ್ದು, ಮತ್ತಷ್ಟು ದೇಗುಲಗಳಲ್ಲಿ ಕದ್ದಿರುವ ಬಗ್ಗೆ ವಿಚಾರಿಸಲಾಗುತ್ತಿದೆ.












































