Coastal

ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಗೆ ಮಂಗಳೂರಿನ ಜಿಲ್ಲಾ ಕಚೇರಿಯ ವಾಸ್ತು ದೋಷ ಕಾರಣ: ಮೆಟ್ಟಿಲು, ಶೌಚಾಲಯ ಒಡೆದು ರಚನೆ

ಮಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ (2018) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿದ್ದಕ್ಕೆ ಮಂಗಳೂರಿನ ಜಿಲ್ಲಾ ಕಚೇರಿಯ ವಾಸ್ತು ದೋಷವೇ ಕಾರಣ ಎಂದು ಕಂಡುಕೊಂಡಿರುವ ಜಿಲ್ಲಾ ಕಾಂಗ್ರೆಸ್ ನಾಯಕರು ಇದೀಗ ಕಚೇರಿಯ ಮೆಟ್ಟಿಲು ಹಾಗು ಶೌಚಾಲಯವನ್ನು ಒಡೆದು ಮರು ನಿರ್ಮಿಸಲು ಹೊರಟಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ ಮಂಗಳೂರು ಕ್ಷೇತ್ರದಲ್ಲಿ ಯು ಟಿ ಖಾದರ್ ಅವರನ್ನು ಹೊರತು ಪಡಿಸಿ ಉಳಿದೆಲ್ಲೆಡೆ ಹೀನಾಯ ಸೋಲು ಅನುಭವಿಸಿತ್ತು. ಈ ಸೋಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಭವನದಲ್ಲಿ ವಾಸ್ತು ದೋಷವೇ ಕಾರಣ ಎಂದು ಆರೋಪಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಒಟ್ಟು 8 ಮೆಟ್ಟಿಲುಗಳು ಇದ್ದು, ಲಾಭ ನಷ್ಟದ ಲೆಕ್ಕಾಚಾರ ಹಾಕಿದಾಗ ಕೊನೆಯ ಮೆಟ್ಟಲು ನಷ್ಟ ಬರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಆಗುತ್ತಿಲ್ಲ ಎಂದು ಹಿರಿಯ ವಾಸ್ತು ತಜ್ಞರೊಬ್ಬರು ಜಿಲ್ಲಾ ನಾಯಕರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಕೊನೆಯ ಮೆಟ್ಟಿಲನ್ನು ಒಡೆದು ಹಾಕಿ ಲೆವೆಲ್ ಮಾಡುವ ಕಾರ್ಯಕ್ಕೆ ಕೈ ನಾಯಕರು ಕೈ ಹಾಕಿದ್ದಾರೆ. ಕಚೇರಿಯಲ್ಲಿ ಇರುವ ಶೌಚಾಲಯವೂ ವಾಸ್ತು ಪ್ರಕಾರ ಇಲ್ಲ ಎಂದು ತಿಳಿದು ಬಂದ ಕಾರಣ ಅದನ್ನೂ ಮರು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

ಈ ಮೂಲಕ ಜಿಲ್ಲಾ ಕಾಂಗ್ರೆಸ್ 2023 ರ ವಿಧಾನ ಸಭಾ ಚುನಾವಣೆಗೆ ಅಣಿಯಾಗುತ್ತಿದೆ. ಯಾವುದೇ ಅವಕಾಶವನ್ನೂ ಬಿಡದಿರಲು ನಿರ್ಧರಿಸಿ ಮೊದಲು ವಸ್ತು ಕಡೆಗೆ ಗಮನ ಹರಿಸಿದೆ.

Exit mobile version