
ಕೊಣಾಜೆ: ಕೊಣಾಜೆ ಸಮೀಪದ ಹರೇಕಳ ಅಂಗನವಾಡಿಗೆ ಗ್ಯಾಸ್ ಸ್ಟವ್ ರಿಪೇರಿಗೆ ಎಂದು ಬಂದ ನಿಜಾಮುದ್ದೀನ್ ಎಂಬ ಮುಸ್ಲಿಂ ವ್ಯಕ್ತಿಯು ಅಂಗನವಾಡಿಯ ಸಹಾಯಕಿಯ ಕೈ ಹಿಡಿದೆಳೆದು ಅಸಭ್ಯವಾಗಿ ವರ್ತಿಸಲು ಯತ್ನಿಸಿದ ಘಟನೆ ನಡೆದಿದ್ದು ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
ಹರೇಕಳ ಅಂಗನವಾಡಿಯಲ್ಲಿ ಗ್ಯಾಸ್ ಸ್ಟವ್ ಕೆಟ್ಟಿದ್ದ ಕಾರಣ ಅಂಗನವಾಡಿ ಶಿಕ್ಷಕಿ ಹೇಳಿದಂತೆ ಸಹಾಯಕಿ ಅವರು ಗ್ಯಾಸ್ ಸ್ಟವ್ ರಿಪೇರಿ ಮಾಡುವವರನ್ನು ಬರಲು ಹೇಳಿದ್ದಾರೆ. ಅದರಂತೆ ಆಲಡ್ಕ ನಿವಾಸಿ ನಿಜಾಮುದ್ದೀನ್ (31 ವರ್ಷ) ಎಂಬಾತ ಬುಧವಾರ ಅಂಗನವಾಡಿಗೆ ಬಂದಿದ್ದಾನೆ. ಶಿಕ್ಷಕಿಯವರು ಮಕ್ಕಳ ಜತೆ ಇದ್ದುದ್ದನ್ನು ಗಮನಿಸಿ ಅಡುಗೆ ರೂಮಿನಲ್ಲಿದ್ದ ನಿಜಾಮುದ್ದೀನ್ ಗ್ಯಾಸ್ ಸ್ಟವ್ ಅನ್ನು ಚೀಲದಲ್ಲಿ ತುಂಬಿಸುವ ನೆಪದಲ್ಲಿ ಅದೇ ಕೋಣೆಯಲ್ಲಿದ್ದ ಸಹಾಯಕಿಯ ಕೈ ಹಿಡಿದು ಎಳೆದಿದ್ದಾನೆ. ಆಕೆ ತಪ್ಪಿಸಿಕೊಂಡಿದ್ದಾಳೆ. ಅದನ್ನು ಗಮನಿಸಿ ನಿಜಾಮುದ್ದೀನ್ ಆಕೆ ಬಳಿ “ಬೇಜಾರು ಮಾಡಿಕೊಳ್ಳಬೇಡ” ಎಂದು ಹೇಳಿ ಹೋಗಿದ್ದ ಎನ್ನಲಾಗಿದೆ. ಆತ ತೆರಳಿದ ಬಳಿಕ ಸಹಾಯಕಿ ಈ ವಿಷಯವನ್ನು ಶಿಕ್ಷಕಿ ಬಳಿ ಹೇಳಿದ್ದು ಅವರು ತಕ್ಷಣ ಆಕೆಯ ಅಣ್ಣಂದಿರಿಗೆ ವಿಷಯ ತಿಳಿಸುವಂತೆ ಹೇಳಿದ್ದಾರೆ.
ಇದೀಗ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿ ಆರೋಪಿ ನಿಜಾಮುದ್ದೀನ್ ಅನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.












































