
ಮಳಲಿ/ಮಂಗಳೂರು: ಮಳಲಿಯಲ್ಲಿರುವ ದರ್ಗಾವನ್ನು ಇತ್ತೀಚಿಗೆ ನವೀಕರಣಕ್ಕಾಗಿ ಕೆಡವಿದಾಗ ದೇವಸ್ಥಾನವನ್ನು ಹೋಲುವ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಹಿನ್ನಲೆ ತಿಳಿಯುವ ನಿಟ್ಟಿನಲ್ಲಿ ಕೇರಳದ ಪ್ರಸಿದ್ಧ ತಂತ್ರಿಗಳಿಂದ ತಾಂಬೂಲ ಪ್ರಶ್ನೆ ಮೊರೆ ಹೋಗಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ಮೇ 24 ಅಥವಾ ಮೇ 25 ರಂದು ಈ ತಾಂಬೂಲ ಪ್ರಶ್ನೆ ನಡೆಯಲಿದ್ದು ಇಂದು ಕೇರಳದಿಂದ ಆಗಮಿಸಿದ ತಂತ್ರಿಗಳು ದರ್ಗಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಗಳೂರಿನ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾ ನವೀಕರಣಕ್ಕಾಗಿ ದರ್ಗಾದ ಮುಂಭಾಗವನ್ನು ಕೆಡವಲಾಗಿತ್ತು. ಈ ಸಂದರ್ಭ ಒಳಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ರೀತಿಯ ಮಾದರಿ ಪತ್ತೆಯಾಗಿತ್ತು. ತಕ್ಷಣ ಸ್ಥಳೀಯರು ಹಾಗು ಹಿಂದೂ ಸಂಘಟನೆಗಳು ಜಮಾಯಿಸಿ ಸರ್ಕಾರೀ ಅಧಿಕಾರಿಗಳ ನೇತೃತ್ವದಲ್ಲಿ ನವೀಕರಣ ಕಾರ್ಯ ನಿಲ್ಲಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಮಾಡಲಾಗಿತ್ತು. ದರ್ಗಾವು ಈ ಹಿಂದೆ ಜೈನ ಅಥವಾ ಹಿಂದೂ ದೇವಸ್ಥಾನ ಆಗಿದ್ದಿರುವ ಸಾಧ್ಯತೆ ಬಗ್ಗೆ ಸ್ಥಳೀಯರಲ್ಲಿ ಅನುಮಾನ ವ್ಯಕ್ತಪಡಿಸಿದ್ದರು.
ವಿಶ್ವ ಹಿಂದೂ ಪರಿಷತ್ ಇದನ್ನು ಗಂಭೀರವಾಗಿ ಪರಿಗಣಿಸಿ ಜಾಗದ ಧಾರ್ಮಿಕ ಹಿನ್ನಲೆ ತಿಳಿಯಲು ಕೇರಳದಿಂದ ತಂತ್ರಿಗಳನ್ನು ಕರೆಸಿಕೊಂಡಿದೆ. ಇದರ ಜತೆಗೆ ಹೋರಾಟ ಸಂಘಟಿಸಲು ಸಭೆ ನಡೆಸಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.












































