
ಮಂಗಳೂರು: ಮಂಗಳೂರಿನ ಶಕ್ತಿನಗರದ ಮುಖ್ಯ ರಸ್ತೆಯಲ್ಲಿ ಮಾರುತಿ ಸ್ವಿಫ್ಟ್ ಕಾರೊಂದು ಹೊತ್ತಿಉರಿದ ಘಟನೆ ಮಂಗಳವಾರ ರಾತ್ರಿ 8:15 (ಮಾರ್ಚ್ 29) ಸಮಯದಲ್ಲಿ ಜರಗಿದೆ. ಬೆಂಕಿಯ ಕೆನ್ನಾಲಿಗೆಗೆ ಕಾರು ಸಂಪೂರ್ಣ ಭಸ್ಮವಾಗಿದೆ.
ಮಂಗಳವಾರ ರಾತ್ರಿ ಮಹಿಳೆಯೊಬ್ಬರು ಬಿಕರ್ನಕಟ್ಟೆ ಕಡೆಯಿಂದ ಶಕ್ತಿನಗರ ಕಡೆಗೆ ಚಲಾಯಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಒಮ್ಮಿಂದೊಮ್ಮೆಲೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಮಹಿಳೆ ಕಾರನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಕಾರಿನಿಂದ ಹೊರಗೆ ಧಾವಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಂಕಿ ಕಾರಿನ ತುಂಬಾ ವ್ಯಾಪಿಸಿದ್ದು ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂಕಿ ಕಾಣಿಸಿಕೊಳ್ಳಲು ಏನು ಕಾರಣ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಮಹಿಳೆ ಹೇಳಿದಂತೆ ಅವರು ಮೊಬೈಲ್ ಅನ್ನು ಚಾರ್ಜ್ ಗೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಚಾರ್ಜ್ ಗೆ ಇಟ್ಟ ಕಾರಣ ಬೆಂಕಿ ಕಾಣಿಸಿಕೊಂಡಿದೆ ಎಂಬ ನಿರ್ಧಾರಕ್ಕೆ ಬರಲಾಗದು.
ಬೆಂಕಿಯ ಆರ್ಭಟ ಯಾವ ರೀತಿ ಇತ್ತೆಂದರೆ ಅಗ್ನಿಶಾಮಕ ವಾಹನ ಆಗಮಿಸುವ ಹೊತ್ತಿಗೆ ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿ ಕೇವಲ ಅದರ ಬಾಡಿ ಮಾತ್ರ ಇತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಘಟನೆ ನಡೆದ ಸಂದರ್ಭ ಪೊಲೀಸರು ರಸ್ತೆಯ ಎರಡೂ ಬದಿಯನ್ನು ಬ್ಲಾಕ್ ಮಾಡಿ ವಾಹನಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದರು. ಹಾಗಾಗಿ ಹೆಚ್ಚಿನ ಅನಾಹುತವಾಗುವುದು ತಪ್ಪಿದೆ.