Karnataka

ಜನವರಿ 22ರವರೆಗೆ ರಾಜ್ಯದಲ್ಲಿ ಸೂಕ್ಷ್ಮ ಪ್ರದೇಶದಲ್ಲಿನ ದೇಗುಲಗಳ ಬಳಿ ಕಟ್ಟೆಚ್ಚರ

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆ ಕರ್ನಾಟಕದಾದ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿನ ದೇಗುಲಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಬೆಂಗಳೂರು ನಗರ ಸೇರಿ ರಾಜ್ಯದ ಎಲ್ಲೆಡೆ ಇದೇ ತಿಂಗಳ 22ರವರೆಗೂ ಹೈ ಅಲರ್ಟ್ ಆಗಿರಬೇಕು ಎಂದು ಎಲ್ಲಾ ಕಮೀಷನರೇಟ್ ಹಾಗೂ ಜಿಲ್ಲಾ ಎಸ್​​ಪಿಗಳಿಗೆ ಡಿಜಿ ಐಜಿಪಿ ಅಲೋಕ್ ಮೋಹನ್ ಸೂಚನೆ ನೀಡಿದ್ದಾರೆ.

ವಿಶೇಷವಾಗಿ ಬೆಂಗಳೂರು, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ಉಡುಪಿ ಸೇರಿ ಕೆಲ ಸೂಕ್ಷ್ಮ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಕಮೀಷನರೇಟ್ ಹಾಗೂ ಎಲ್ಲಾ ಜಿಲ್ಲಾ ಎಸ್​​ಪಿಗಳ ಜೊತೆ ನಡೆದ ಸಭೆಯಲ್ಲಿ ಶ್ರೀರಾಮನ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಪೊಲೀಸರ ಕಣ್ಗಾವಲಿಗೆ ಸೂಚನೆ ನೀಡಲಾಗಿದೆ. ಅಗತ್ಯವೆನಿಸಿದರೆ ಕೆಎಸ್​​ಆರ್​ಪಿ ನಿಯೋಜನೆ ಮಾಡುವಂತೆ ಕೂಡ ಹೇಳಲಾಗಿದೆ.

ದೇಗುಲಗಳ ಬಳಿ ರಾಜಕೀಯ ಚರ್ಚೆ ಮಾಡುವುದು, ಪ್ರತಿಭಟನೆ ಮಾಡುವುದು, ಸಮಾಜದ ಶಾಂತಿ ಭಂಗ ಮಾಡುವ ಘೋಷಣೆ ಕೂಗುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳ ಮೇಲೆ ಕಣ್ಗಾವಲು ಇರಿಸಬೇಕು ಹಾಗು ಸಾಮಾಜಿಕ ಜಾಲತಾಣದಲ್ಲಿ ಅವಮಾನಕಾರಿಯಾಗಿ ಪೋಸ್ಟ್ ಹಾಕುವವರ ಬಗ್ಗೆಯೂ ನಿಗಾ ಇಡುವಂತೆ ಸೂಚಿಸಲಾಗಿದೆ.

Exit mobile version