Karnataka

ಚಾಮರಾಜಪೇಟೆ ಈದ್ಗಾ ಮೈದಾನ ವಕ್ಫ್ ಬೋರ್ಡಿಗೆ ಸೇರಿಲ್ಲ, ಅದು ಕಂದಾಯ ಇಲಾಖೆ ಆಸ್ತಿ: ಬಿಬಿಎಂಪಿ ಘೋಷಣೆ

ಬೆಂಗಳೂರು: ಭಾರೀ ವಿವಾದ ಸೃಷ್ಟಿಸಿದ್ದ ಚಾಮರಾಜಪೇಟೆ ಈದ್ಗಾ ಮೈದಾನ ಒಡೆತನ ವಿಷಯಕ್ಕೆ ಕೊನೆಗೂ ಬಿಬಿಎಂಪಿ ತೆರೆ ಎಳೆಯುವ ಕಾರ್ಯ ಮಾಡಿದ್ದು, ವಿವಾದಿತ ಭೂಮಿ ಕಂದಾಯ ಇಲಾಖೆಗೆ ಸೇರಿದ ಆಸ್ತಿ ಎಂದು ಶನಿವಾರ ಘೋಷಣೆ ಮಾಡಿದೆ. ಈ ಮೂಲಕ ಆ ಮೈದಾನ ವಕ್ಫ್ ಬೋರ್ಡಿಗೆ ಸೇರಿದ್ದು ಎಂಬ ವಿವಾದಕ್ಕೆ ತೆರೆ ಎಳೆದಿದೆ. ಆದರೆ ವಕ್ಫ್ ಬೋರ್ಡ್ ಈ ಬಗ್ಗೆ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿಕೊಂಡಿದೆ.

ಬಿಬಿಎಂಪಿಯ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ಅವರು, ‘ಬೆಂಗಳೂರು ನಗರದ ಚಾಮರಾಜಪೇಟೆಯ ಸರ್ವೇ ನಂಬರ್ 40ರಲ್ಲಿ 2 ಎಕರೆ 5 ಗುಂಟೆ ಈದ್ಗಾ ಮೈದಾನವು ‘ಕಂದಾಯ ಇಲಾಖೆಗೆ’ ಸೇರಿದೆ ಎಂದು ಘೋಷಿಸಿ ಆದೇಶ ಹೊರಡಿಸಲಾಗಿದೆ” ಎಂದು ಹೇಳಿದ್ದಾರೆ.

ಬಿಬಿಎಂಪಿ ತನ್ನ ದಾಖಲೆಗಳಲ್ಲಿ ಆಟದ ಮೈದಾನ ಎಂದು ದಾಖಲಾಗಿದೆ ಎಂದು ತಿಳಿಸಿತ್ತು. ವಕ್ಫ್ ಬೋರ್ಡ್ ಆ ಈದ್ಗಾ ಮೈದಾನ ವಕ್ಫ್ ಬೋರ್ಡ್‍ಗೆ ಸೇರಿದೆ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಬಿಬಿಎಂಪಿಗೆ ನೀಡಿತ್ತು. ಆದರೆ ಬಿಬಿಎಂಪಿ ವಕ್ಫ್ ಬೋರ್ಡ್ ಹೆಸರಿಗೆ ಖಾತೆಯನ್ನು ಮಾಡಲು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಎರಡು ಬಾರಿ ವಕ್ಫ್ ಬೋರ್ಡ್‍ಗೆ ನೋಟೀಸ್ ನೀಡಿತ್ತು. ಆದರೆ ವಕ್ಫ್ ಬೋರ್ಡ್ ನ್ಯಾಯಾಲಯದ ಆದೇಶವನ್ನು ಹೊರತು ಪಡಿಸಿ, ಈದ್ಗಾ ಮೈದಾನ ವಕ್ಫ್ ಆಸ್ತಿ ಎಂಬುದನ್ನು ಪುಷ್ಟಿಕರಿಸುವಂತಹ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಹಾಗಾಗಿ ವಿಚಾರಣೆಯ ಬಳಿಕ ಆಸ್ತಿಯನ್ನು ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಎಂದು ನಮೂದಿಸಲಾಗಿದೆ ಎಂದು ಜಂಟಿ ಆಯುಕ್ತ ಶ್ರೀನಿವಾಸ್ ಆದೇಶ ಹೊರಡಿಸಿದ್ದಾರೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಕ್ಫ್ ಬೋರ್ಡ್ ಬಿಬಿಎಂಪಿ ಆದೇಶಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದೆ. ಈಗ ಬಿಬಿಎಂಪಿ ಅದು ಕಂದಾಯ ಇಲಾಖೆಯ ಆಸ್ತಿ ಎಂದು ತಿಳಿಸಿರುವುದರಿಂದ, ಕಂದಾಯ ಇಲಾಖೆ ಜೊತೆ ಯಾವ ರೀತಿ ವ್ಯವಹರಿಸಬೇಕು ಎಂಬುದರ ಕುರಿತು ಮುಂದಿನ ಹೆಜ್ಜೆಗಳನ್ನು ಇಡುತ್ತೇವೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಹೇಳಿದ್ದಾರೆ.

Exit mobile version