
ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಹೋಟೆಲಿನಲ್ಲಿ ಕಳೆದ ವಾರ ಸಂಭವಿಸಿದ ಬಾಂಬ್ ಸ್ಫೋಟ ಉಗ್ರ ಕೃತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಶಂಕಿತ ಉಗ್ರ ಸ್ಪೋಟದ ನಂತರ ಬಟ್ಟೆ ಬದಲಿಸಿ ಬಸ್ನಲ್ಲಿ ಪ್ರಯಾಣಿಸಿದ್ದಾನೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಗುರುವಾರ ತಿಳಿಸಿದ್ದಾರೆ. ಆತ ತುಮಕೂರು ಮಾರ್ಗವಾಗಿ ಬಳ್ಳಾರಿಗೆ ತೆರಳಿರುವ ಸುಳಿವು ಸಿಕ್ಕಿದೆ ಎನ್ನಲಾಗಿದೆ.
ಶಂಕಿತ ವ್ಯಕ್ತಿ ಬೆಂಗಳೂರಿನ ಹೂಡಿ ಬಳಿ ಬಟ್ಟೆ ಬದಲಿಸಿ ತಾನು ಉಗ್ರ ಕೃತ್ಯದ ಸಂದರ್ಭ ಧರಿಸಿದ್ದ ಟೋಪಿ ಬಿಟ್ಟು ಹೋಗಿರುವುದು ಗೊತ್ತಾಗಿದೆ. ಆರೋಪಿ ಬಸ್ನಲ್ಲಿ ತುಮಕೂರು ಕಡೆಗೆ ಪ್ರಯಾಣಿಸಿ ಬಳಿಕ ಬಳ್ಳಾರಿಗೆ ತೆರಳಿದ್ದಾನೆ ಎಂಬ ಸುಳಿವಿನ ಮೇರೆಗೆ ಪೊಲೀಸರು ಆತನ ಚಲನವಲನವನ್ನು ಪರಿಶೀಲಿಸುತ್ತಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ನಡೆದ ಉಗ್ರ ಐಇಡಿ ಸ್ಫೋಟ ಪ್ರಕರಣದ ತನಿಖೆಯನ್ನು ಕೇಂದ್ರದ ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸುತ್ತಿದ್ದು, ಬೆಂಗಳೂರು ಪೊಲೀಸ್ ಕೇಂದ್ರ ಅಪರಾಧ ವಿಭಾಗ ಎನ್ಐಎಗೆ ಸಹಾಯ ಮಾಡುತ್ತಿದೆ. ಈಗಾಗಲೇ ಎನ್ಐಎ ತುಮಕೂರು ಹಾಗು ಬಳಲರಿಯಲ್ಲಿ ಪರಿಶೀಲನೆ ನಡೆಸಿದೆ.