
ಬೆಂಗಳೂರು: ಟಿಪ್ಪು ಇತಿಹಾಸ ಎಂದರೆ ಅದು ತಾಲೀಬಾನ್, ಐಸಿಸ್ ಮತಾಂಧರಷ್ಟೇ ಘೋರ. ಕಾಶ್ಮೀರದಲ್ಲಿ ಮತಾಂಧರು ನಡೆಸಿದ ನರಮೇಧವನ್ನೂ ಮೀರಿದ ಕೃತ್ಯವನ್ನು ಟಿಪ್ಪು ನಡೆಸಿದ್ದಾನೆ ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಸತ್ಯವನ್ನು ಮುಚ್ಚಿಟ್ಟು ಉದಾತ್ತ, ಸ್ವಾತಂತ್ರ್ಯ ವೀರ ಎಂದು ಬಣ್ಣಿಸುವುದು ದೇಶದ ಇತಿಹಾಸಕ್ಕೆ ಮಾಡುವ ಅಪಮಾನ ಎಂದು ರಾಜ್ಯ ಬಿಜೆಪಿ ಹೇಳಿಕೊಂಡಿದೆ.
ಮತಾಂಧ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ್ದು ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿಯೇ ಹೊರತು ಭಾರತವನ್ನು ಬ್ರಿಟಿಷರಿಂದ ಮುಕ್ತಿಗೊಳಿಸುವುದಕ್ಕಲ್ಲ ಎಂದು ಬಿಜೆಪಿ ಹೇಳಿದ್ದು ಈ ಸಂಬಂಧ ಸರಣಿ ಟ್ವೀಟ್ ಮಾಡಿದೆ. ಟಿಪ್ಪು ಕಾಲವೆಂದರೆ ಅದು ಹಿಂದೂ ಮತ್ತು ಕ್ರೈಸ್ತರ ದೌರ್ಭಾಗ್ಯದ ಕಾಲ. ಜನಾನುರಾಗಿಯಾಗಿದ್ದ ಮೈಸೂರು ಒಡೆಯರನ್ನು ಕಪಟ ಮಾರ್ಗದ ಮೂಲಕ ಅಧಿಕಾರದಿಂದ ಕೆಳಕ್ಕೆ ಇಳಿಸಿದರು. ಹಿಂದೂಗಳು ಮೂರನೇ ದರ್ಜೆಯ ಪ್ರಜೆಗಳಾಗಿದ್ದರು. ನೆತ್ತರಕೆರೆಯಲ್ಲಿ ಸಾವಿರಾರು ಕ್ರೈಸ್ತರ ಹತ್ಯೆ ನಡೆಯಿತು ಎಂದು ಬಿಜೆಪಿ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಶಾಲಾ ಪುಸ್ತಕದಲ್ಲಿ ಟಿಪ್ಪುವಿನ ಸುಳ್ಳು ಇತಿಹಾಸವನ್ನು ಹೇಳಿಕೊಡುತ್ತಿದ್ದು, ಟಿಪ್ಪು ಮಾತ್ರವಲ್ಲ ಶಾಲಾ ಪಠ್ಯಕ್ರಮದಲ್ಲಿ ಸೇರಿದ ಎಲ್ಲಾ ಸುಳ್ಳು ಇತಿಹಾಸಗಳ ಪರಿಷ್ಕರಣೆಯಾಗಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇತಿಹಾಸ ವಾಸ್ತವ ಸತ್ಯವನ್ನು ಹೇಳಬೇಕೇ ಹೊರತು ಸುಳ್ಳಿನಿಂದ ಕೂಡಿರಬಾರದು ಎಂದು ಬಿಜೆಪಿ ಹೇಳಿದೆ.
ನೆತ್ತರಕೆರೆ, ಮಡಿಕೇರಿಯಲ್ಲಿ ಟಿಪ್ಪು ನಡೆಸಿದ ನರಮೇಧ ಮರೆಯಲು ಸಾಧ್ಯವೇ? ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ. ಒಂದೇ ಒಂದು ಯುದ್ಧವನ್ನು ನೇರಮಾರ್ಗದಲ್ಲಿ ಗೆಲ್ಲದ ಮತಾಂಧನಿಗೆ “ಮೈಸೂರು ಹುಲಿ” ಎಂಬ ಬಿರುದು ಪ್ರಾಪ್ತವಾಗಿದ್ದೇ ಒಂದು ಚೋದ್ಯ. ನೈಜತೆ ಬಯಲಾಗಲೇಬೇಕಲ್ಲವೇ? ಎಂದು ಸರಣಿ ಟ್ವೀಟ್ ಗಳಲ್ಲಿ ಬಿಜೆಪಿ ಬರೆದುಕೊಂಡಿದೆ.