
ಉಡುಪಿ: ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ಹಿಡಿದು ಹಲಾಲ್ ವರೆಗೆ ಹಿಂದೂ ಹಾಗು ಮುಸ್ಲಿಮರ ನಡುವೆ ಉಂಟಾಗಿರುವ ಕಂದಕಕ್ಕೆ ಪರಿಹಾರ ಕಂಡುಕೊಳ್ಳಲು ಸಹಕರಿಸಬೇಕೆಂದು ಮುಸ್ಲಿಂ ನಿಯೋಗ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮನವಿ ಮಾಡಿತು. ಈ ಸಂದರ್ಭ ಶ್ರೀಗಳು ನಿಯೋಗಕ್ಕೆ ಮುಟ್ಟಿ ನೋಡುವಂತಹ ಬುದ್ಧಿ ಮಾತು ಹೇಳಿ ಕಳುಹಿಸಿದ್ದಾರೆ.
ತನ್ನ ಭೇಟಿಗೆ ಬಂದ ಮುಸ್ಲಿಂ ನಿಯೋಗದ ಜತೆ ಮಾತನಾಡಿದ ಪೇಜಾವರ ಶ್ರೀಗಳು, ಈಗ ಉಂಟಾಗಿರುವ ಪರಿಸ್ಥಿತಿಗೆ ಮೂಲ ಕಾರಣ ಯಾರು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಸಮಸ್ಯೆಗಳ ಹಿಂದೆ ಹಿಂದೂಗಳ ಅನೇಕ ವರ್ಷಗಳ ನೋವು ಇದೆ. ಅದಕ್ಕೆ ಕಾರಣ ಯಾರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಕಂದಕ ಸೃಷ್ಟಿಸುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳಿ. ಸಮಾಜದಲ್ಲಿ ಕಾನೂನು ಶಾಂತಿ ನೆಮ್ಮದಿಗೆ ವಿರುದ್ಧವಾಗಿ ವರ್ತಿಸುತ್ತಿರುವ ರೀತಿಯನ್ನು ಸರಿಪಡಿಸಿಕೊಂಡು ಬನ್ನಿ. ಆ ನಂತರ ಸಮಸ್ಯೆ ಪರಿಹಾರ ಕುರಿತು ಚರ್ಚಿಸೋಣ ಎಂದು ಶ್ರೀಗಳು ಖಡಕ್ ಆಗಿ ಹೇಳಿದ್ದಾರೆ.
ನೊಂದಿರುವ ಸಮಾಜವನ್ನು ಬಿಟ್ಟು ಪರಿಹಾರ ನನ್ನ ಒಬ್ಬನಿಂದ ಸಾಧ್ಯವಿಲ್ಲ. ಹಿಂದೂಗಳ ಅನೇಕ ವರ್ಷಗಳ ನೋವು ಈಗ ಹೊರ ಬರುತ್ತಿದೆ. ಗೋಹತ್ಯೆ ಯಾಕೆ ನಿಂತಿಲ್ಲ? ಜೀವನದ ಅಗತ್ಯಗಳಿಗೆ ಗೋವುಗಳನ್ನು ಸಾಕುತ್ತಿರುವವರ ಮನೆಗೆ ನುಗ್ಗಿ ಬೆದರಿಕೆ ಹಾಕಿ ಗೋವುಗಳನ್ನು ಹೊತ್ತೊಯ್ಯುತ್ತಿದ್ದೀರಿ. ಇಂತಹ ಅನೇಕ ಕಾನೂನು ಬಾಹಿರ ಚಟುವಟಿಕೆಗಳಿಂದ ಹಿಂದೂ ಸಮಾಜ ನೋವು ಎದುರಿಸುತ್ತಿದೆ ಎಂದು ಪೂಜ್ಯ ಪೇಜಾವರ ಶ್ರೀಗಳು ನಿಯೋಗಕ್ಕೆ ಹೇಳಿದ್ದಾರೆ.