
ಬೆಂಗಳೂರು: ಮುಖ್ಯಮಂತ್ರಿಯಾಗಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಬಸವರಾಜ ಬೊಮ್ಮಾಯಿ ರಾಜ್ಯಕ್ಕೆ ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.
ಆ ಹೊಸ ಯೋಜನೆಗಳು ಯಾವುವು. ಯಾವುದಕ್ಕೆ ಎಷ್ಟೆಷ್ಟು ಅನುದಾನ ಮೀಸಲಿರಿಸಿದ್ದಾರೆ ಎಂಬುದನ್ನು ನೋಡುವುದಾದರೆ;
ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ 250 ರೂ. ಗಳಂತೆ ಡೀಸೆಲ್ ಸಹಾಯಧನ ನೀಡುವ ‘ರೈತ ಶಕ್ತಿ’ ನೂತನ ಯೋಜನೆ ಘೋಷಣೆ. ಇದಕ್ಕಾಗಿ 600 ಕೋಟಿ ರೂ. ಅನುದಾನ ಮೀಸಲು.
ಕೆರೆಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಘೋಷಣೆ. ಪ್ರಾಕೃತಿಕ ವಿಕೋಪ, ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 200 ಕೋಟಿ ರೂ. ಅನುದಾನ.
ಸಮುದ್ರ ಪಕ್ಕದಲ್ಲಿ ನದಿಗಳಿಗೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಗಟ್ಟಲು ಖಾರ್ಲ್ಯಾಂಡ್ ಯೋಜನೆ ಅನುಷ್ಠಾನ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ಮುಂದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಅನುಷ್ಠಾನಕ್ಕೆ ಸಿದ್ಧತೆ.
ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕಾಳಿ ನದಿಯ ನೀರು ಬಳಸಿ ಕುಡಿಯುವ ನೀರಿನ ಯೋಜನೆ.
ಕಡಿಮೆ ಅಭಿವೃದ್ಧಿ ಹೊಂದಿರುವ ತಾಲೂಕುಗಳ ಸಮಗ್ರ ಅಭಿವೃದ್ಧಿಗೆ ಒಟ್ಟು 3,000 ಕೋಟಿ ರೂ. ಅನುದಾನ. 93 ತಾಲ್ಲೂಕುಗಳಲ್ಲಿ ಶಿಕ್ಷಣ, 100 ತಾಲ್ಲೂಕುಗಳಲ್ಲಿ ಆರೋಗ್ಯ ಸೇವೆ ಹಾಗು 102 ತಾಲ್ಲೂಕುಗಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಕ್ರಮ. 100 ಹಿಂದುಳಿದ ತಾಲೂಕುಗಳಲ್ಲಿ ತಲಾ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ. ಅದಕ್ಕಾಗಿ ಪ್ರತ್ಯೇಕ 1,000 ಕೋಟಿ ರೂ. ಅನುದಾನ ಮೀಸಲು.












































