Karnataka

ಬಿಜೆಪಿಯಲ್ಲಿರುವ ‘ಸಂತೋಷ ಕೂಟ’ ಯಡಿಯೂರಪ್ಪ ಕುಟುಂಬವನ್ನು ವನವಾಸಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ: ಕಾಂಗ್ರೆಸ್

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಮತ್ತೆ ಟಿಕೆಟ್ ನಿರಾಕರಿಸುವ ಮೂಲಕ ಸಂಪೂರ್ಣ ಯಡಿಯೂರಪ್ಪ ಕುಟುಂಬವನ್ನೇ ರಾಜಕೀಯವಾಗಿ ಮುಗಿಸಲು ಬಿಜೆಪಿಯಲ್ಲಿರುವ ‘ಸಂತೋಷ’ ಬಣ ಯಶಸ್ವೀಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಟಿಕೆಟ್ ತಪ್ಪಿದ ನಂತರ ವಿಜಯೇಂದ್ರ ಅವರು ಅಭಿಮಾನಿಗಳಿಗೆ ಸಂಯಮ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ್ದರ ಹಿಂದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕೈವಾಡವಿದೆ ಎಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಸ್ವತಃ ವಿಜಯೇಂದ್ರ ಅಭಿಮಾನಿಗಳು ಸಾರ್ವಜನಿಕವಾಗಿ ಈ ಮಾತುಗಳನ್ನು ಆಡುತ್ತಿದ್ದಾರೆ.

ಈ ಬಗ್ಗೆ ಬಿಜೆಪಿಯನ್ನು ಹಾಗು ಯಡಿಯೂರಪ್ಪನವರನ್ನು ಕುಟುಕಿರುವ ರಾಜ್ಯ ಕಾಂಗ್ರೆಸ್, ‘ಬಿಎಸ್ ವೈ ಸಿಎಂ ಕುರ್ಚಿಯಿಂದ ಇಳಿಯುವ ಸಂದರ್ಭದಲ್ಲಿ ಕಣ್ಣೀರು, ವಿಜಯೇಂದ್ರಗೆ ಟಿಕೆಟ್ ನಿರಾಕರಿಸುವಾಗ ರಕ್ತಕಣ್ಣೀರು, ಇದು ಬಿಜೆಪಿ ಯಡಿಯೂರಪ್ಪನವರಿಗೆ ನೀಡುತ್ತಿರುವ ಋಣಸಂದಾಯ ಗಿಫ್ಟ್. ಬಿಜೆಪಿಯಲ್ಲಿನ ಸಂತೋಷ ಕೂಟ ಬಿಎಸ್ ವೈ ಕುಟುಂಬವನ್ನೇ ವನವಾಸಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ v/s ಬಿಜೆಪಿ ಯುದ್ಧ ಕಣ ರಂಗೇರಲಿದೆ’ ಎಂದು ಟ್ವೀಟ್ ಮಾಡುವುದರ ಮೂಲಕ ಬಿಜೆಪಿಯನ್ನು ಟೀಕಿಸಿದೆ.

Exit mobile version