ಬೆಂಗಳೂರು: ರೈತರ ಬಗ್ಗೆ ಸಚಿವ ಶಿವಾನಂದ್ ಪಾಟೀಲ್ ಉಡಾಫೆ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೂಡಲೇ ಸಚಿವರು ಕ್ಷಮೆ ಕೇಳಿ, ಹೇಳಿಕೆ ವಾಪಸ್ ಪಡೆಯಬೇಕು ಅಂತ ಆಗ್ರಹಿಸಿದ್ದಾರೆ.ಪರಿಹಾರ ಆಸೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ರೈತ ಸಚಿವ ಶಿವಾನಂದ್ ಪಾಟೀಲ್ ಅವರು ರೈತರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಅನ್ನದಾತನ ಕಷ್ಟ, ಸಂಕಷ್ಟಗಳ ಬಗ್ಗೆ ಅವಹೇಳನ ಮಾಡುವುದು ಖಂಡಿತಾ ಸರಿಯಲ್ಲ. ಸಚಿವರು ಇಂತಹ ವಿಷಯಗಳ ಬಗ್ಗೆ ಬಹಳ ಎಚ್ಚರಿಕೆ, ಸೂಕ್ಷ್ಮತೆ, ಸಂಯಮದಿಂದ ಮಾತನಾಡಬೇಕು ಎಂದು ಕಿಡಿಕಾರಿದರು.

ಭೂತಾಯಿಯನ್ನೇ ನಂಬಿ ಬದುಕುವ ರೈತ ಮಳೆ ಇಲ್ಲದೆ ತನ್ನ ಭೂಮಿ ಬಂಜರಾಗಲಿ ಎಂದು ಎಂದಿಗೂ ಕೋರುವುದಿಲ್ಲ. ಮಣ್ಣನ್ನೇ ನೆಚ್ಚಿಕೊಂಡು ಬಾಳ್ವೆ ನಡೆಸುವ ರೈತ ಆ ಮಣ್ಣು ದಾಹದಿಂದ ಸೊರಗಲಿ ಎಂದು ಎಂದಿಗೂ ಆಸೆ ಪಡುವುದಿಲ್ಲ ,ಇಡೀ ಮನುಕುಲಕ್ಕೆ ಅನ್ನ ನೀಡುವ ರೈತ ತನ್ನ ಭೂಮಿ ಹಚ್ಚ-ಹಸಿರಾಗಿರಲಿ, ತಾನು ಬೆವರು ಸುರಿಸಿ ಬೆಳೆಸಿದ ಪೈರು ತನ್ನ ಎದೆ ಎತ್ತರಕ್ಕೆ ಬೆಳೆಯಲಿ, ಅದನ್ನು ನಾಲ್ಕು ಜನ ಉಣ್ಣಲಿ ಎಂದು ಆಶಿಸುತ್ತಾನೆಯೆ ಹೊರತು ಬರಗಾಲ ಬರಲಿ ಎಂದು ಕನಸು ಮನಸಿನಲ್ಲೂ ಯೋಚಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಮ್ಮ ಸರ್ಕಾರಕ್ಕೆ ಬರ ಪರಿಹಾರ ಕೊಡಲು ಯೋಗ್ಯತೆ ಇಲ್ಲದಿದ್ದರೆ, ರೈತರ ಕಣ್ಣೀರು ಒರೆಸುವ ಮನಸ್ಸಿಲ್ಲದಿದ್ದರೆ ಸುಮ್ಮನಿದ್ದು ಬಿಡಿ.ಅನ್ನದಾತ ರೈತರನ್ನ ಈ ರೀತಿ ಪದೇ ಪದೇ ಅವಮಾನಿಸಬೇಡಿ ಎಂದು ತಮ್ಮ ಮಂತ್ರಿಗಳಿಗೆ ಬುದ್ಧಿ ಮಾತು ಹೇಳಿ ಎಂದು ಹೆಚ್ಡಿಕೆ ಸಲಹೆ ಕೊಟ್ಟಿದ್ದಾರೆ.
ರಾಜ್ಯ ಸರ್ಕಾರದ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ರೈತರನ್ನು ಅವಮಾನಿಸುತ್ತಿದ್ದಾರೆ. ಅಂಥಹ ಸಚಿವರಿಗೆ ಸಿಎಂ ಕರೆದು ಬುದ್ಧಿವಾದ ಹೇಳಲಿ. ತಿದ್ದಿಕೊಳ್ಳದ ಸಚಿವರ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಕುರಿತು ಶಿವಾನಂದ್ ಪಾಟೀಲ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಅವರ ಹೇಳಿಕೆ ಖಂಡನಾರ್ಹ. ಅವರು ರೈತರನ್ನು ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.