ಮುಂಬೈ: ಜನವರಿ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗಲಿದ್ದು ಇದೀಗ ದೇಶದ ಹಾಗು ವಿಶ್ವದ ಹಿಂದೂ ಬಾಂಧವರ ಗಮನ ಅಯೋಧ್ಯೆಯತ್ತ ನೆಟ್ಟಿದೆ. ರಾಮನಾಮ ಪಾರಾಯಣ ಸೇರಿದಂತೆ ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇದರ ಮಧ್ಯೆ ರಾಮನ ಭಕ್ತಿಯಲ್ಲಿ ಮಿಂದ ಮುಸ್ಲಿಂ ಯುವತಿಯೊಬ್ಬಳು ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಮುಂಬೈನಿಂದ ಕಾಲ್ನಡಿಗೆಯ ಮೂಲಕ ಅಯೋಧ್ಯೆಗೆ ಪ್ರಯಾಣ ಬೆಳೆಸುವ ಮೂಲಕ ಸುದ್ದಿಯಾಗಿದ್ದಾಳೆ.

ಶಬನಮ್ ಶೇಖ್ ಎಂಬ ಹೆಸರಿನ ಯುವತಿ ಭುಜದ ಮೇಲೆ ಒಂದು ಬ್ಯಾಗ್ ಅದರ ಜತೆ ಕೇಸರಿ ಧ್ವಜ,ಬ್ಯಾಗ್ ಮೇಲೆ ರಾಮ ಮಂದಿರದ ಫೋಟೋ ಇರುವ ಒಂದು ಬ್ಯಾನರ್ ಮತ್ತು ತಲೆ ಮೇಲೆ ಹಿಜಾಬ್ ಧರಿಸಿ ಮುಂಬೈನಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಸುಮಾರು 1,500 ಕಿ.ಮೀ ದೂರ ಕ್ರಮಿಸಿ ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಇದುವರೆಗೂ ಸುಮಾರು ೨೫೦ ಕಿಲೋಮೀಟರ್ನಷ್ಟು ಪ್ರಯಾಣ ಮುಗಿಸಿರುವ ಶಬನಮ್ ದಾರಿಯುದ್ದಕ್ಕೂ ರಾಮಭಕ್ತರನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡುತ್ತಾ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಅಯೋಧ್ಯೆ ಕಡೆಗೆ ಸಾಗುತ್ತಿದ್ದಾರೆ.
ಶಬನಮ್ ಹೇಳುವ ಪ್ರಕಾರ ಆಕೆಗೆ ಬಾಲ್ಯದಿಂದಲೂ ರಾಮಾಯಣದ ಅಭಿರುಚಿ ಇತ್ತು. ಆಗ ಟಿವಿಯಲ್ಲಿ ಬರುತ್ತಿದ್ದ ರಾಮಾಯಣ, ಮಹಾಭಾರತ ಕುರಿತಾದ ಧಾರಾವಾಹಿಯನ್ನು ವೀಕ್ಷಿಸಿದ್ದಾರೆ. ಆಕೆಯ ಮಾತಿನಂತೆ ಅವಳು ಶ್ರೀರಾಮನನ್ನು ತನ್ನ ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾಳೆ. ಅಯೋಧ್ಯೆಗೆ ಹೋಗುವ ಆಕೆಯ ಅಭಿಲಾಷೆಯ ಹಿಂದೆ ಆಕೆಯ ಕುಟುಂಬಸ್ಥರ ಪ್ರೋತ್ಸಾಹವೂ ಇದೆ.
ಶ್ರೀರಾಮನ ದರ್ಶನ ಪಡೆದ ನಂತರ ಅಯೋಧ್ಯೆಯ ಧನಿಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿಗೆ ಕೂಡ ಶಬನಮ್ ತೆರಳಲಿದ್ದಾರೆ. ಈ ಮೂಲಕ ತನಗೆ ಹಿಂದೂ ಧರ್ಮ ಹಾಗು ಇಸ್ಲಾಂ ಮತ ಎರಡರಲ್ಲೂ ಸಮಾನ ನಂಬಿಕೆ ಇದೆ ಎಂಬುದನ್ನು ತೋರಿಸುವ ಉದ್ದೇಶ ಆಕೆಯದು.
ತನ್ನನ್ನು ತಾನು ಸನಾತನಿ ಮುಸ್ಲಿಂ ಎಂದು ಕರೆದುಕೊಳ್ಳುವ ಈಕೆ ತನ್ನ ಜೀವನದ ಏಕೈಕ ಗುರಿ ರಾಮಲಲ್ಲಾನ ದರ್ಶನ ಮಾಡುವುದು ಎಂದಿದ್ದಾರೆ. ಆಕೆಯ ಭದ್ರತೆಗಾಗಿ ಮಹಾರಾಷ್ಟ್ರ ಸರ್ಕಾರ ಮೂವರು ಮಹಿಳಾ ಪೊಲೀಸರನ್ನು ನಿಯೋಜಿಸಿದೆ.
ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd