ಬೆಂಗಳೂರು: ಹೆಚ್ಚಿನವರು ಲಸಿಕೆ ತೆಗೆದುಕೊಂಡಿರುವ ಕಾರಣ ಪ್ರಸ್ತುತ ಮೂರನೇ ಅಲೆಯಲ್ಲಿ ಯಾವುದೇ ಭಯಪಡುವಂತಹ ಅಂಶಗಳು ಇಲ್ಲದಿದ್ದರೂ ರಾಜ್ಯ ಸರ್ಕಾರ ಸೋ ಕಾಲ್ಡ್ ತಜ್ಞರ ಸಲಹೆ ಆಧರಿಸಿ ವೀಕೆಂಡ್ ಲಾಕ್ಡೌನ್ ಹಾಗು ನೈಟ್ ಕರ್ಫ್ಯುಗಳನ್ನು ಹೇರಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸರ್ಕಾರ ವೀಕೆಂಡ್ ಲಾಕ್ಡೌನ್ ಅನ್ನು ಹಿಂದಕ್ಕೆ ಪಡೆದಿದ್ದು ರಾತ್ರಿ ಕರ್ಫ್ಯೂವನ್ನು ಮುಂದುವರೆಸಿದೆ.
ರಾಜ್ಯ ಸರಕಾರ ಹೇರಿದ್ದ ವೀಕೆಂಡ್ ಲಾಕ್ಡೌನ್ ನಿಂದಾಗಿ ಹಲವು ವ್ಯಾಪಾರಗಳು ಎರಡು ದಿನ ಬಾಗಿಲು ಮುಚ್ಚಿದ್ದವು. ಪರಿಣಾಮ ಹಲವು ವ್ಯಾಪಾರೀ ವರ್ಗಗಳಿಗೆ ಭಾರೀ ನಷ್ಟವಾಗಿತ್ತು. ಅಲ್ಲದೆ ಅನಾವಶ್ಯಕವಾಗಿ ಲಾಕ್ಡೌನ್ ಮಡಿದ ಬಗ್ಗೆ ಜನರು ಕ್ರುದ್ಧರಾಗಿದ್ದರು. ಮಾಸ್ಕ್ ಕಡ್ಡಾಯ, ಲಸಿಕೆ ಕಡ್ಡಾಯ, ಸಾಮಾಜಿಕ ಅಂತರ ಮುಂತಾದ ನಿಯಮಗಳನ್ನು ಹೇರಿದರೆ ಸಾಕಿತ್ತು ಅನ್ನುವುದು ಜನರ ಅಭಿಪ್ರಾಯವಾಗಿತ್ತು. ಇತ್ತ ಕೋವಿಡ್ ಬಂದವರೂ ಆಸ್ಪತ್ರೆಗೆ ಸೇರುವ ಪ್ರಕರಣಗಳು ತೀರಾ ಕಡಿಮೆಯಾಗಿದ್ದು ಹೆಚ್ಚಿನವರು ಮನೆಯಲ್ಲಿಯೇ ಐಸೋಲೇಷನ್ ಗೆ ಒಳಗಾಗುತ್ತಿದ್ದಾರೆ. ಬಹುಶಃ ಇದೇ ಮೊದಲ ಬಾರಿಗೆ ಜನರ ಅಭಿಪ್ರಾಯಕ್ಕೆ ಕಿವಿಯಾಗಿರುವ ಸರಕಾರ ಕೊನೆಗೂ ವೀಕೆಂಡ್ ಲಾಕ್ಡೌನ್ ಅನ್ನು ಹಿಂಪಡೆದಿದೆ.
ಆದರೆ ರಾತ್ರಿ ಕರ್ಫ್ಯುವನ್ನು ಮುಂದುವರೆಸಿದ್ದು ರಾತ್ರಿ 10 ರಿಂದ ಮುಂಜಾನೆ 5 ಗಂಟೆಯ ತನಕ ಕರ್ಫ್ಯೂ ವಿಧಿಸಿದೆ. ಅನಗತ್ಯವಾದ ನೈಟ್ ಕರ್ಫ್ಯೂವನ್ನು ಕೂಡ ಸರ್ಕಾರ ಹಿಂಪಡೆಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಸದ್ಯಕ್ಕೆ ನೈಟ್ ಕರ್ಫ್ಯೂ ಹಿಂಪಡೆಯುವ ಸಾಧ್ಯತೆಗಳು ಕಾಣುತ್ತಿಲ್ಲ. ಬದಲಾದ ಪರಿಸ್ಥಿಯಲ್ಲೂ ಲಾಕ್ಡೌನ್ ಕರ್ಫ್ಯೂ ಹೇರುತ್ತಿರುವ ರಾಜ್ಯ ಸರಕಾರದ ಬಗ್ಗೆ ಹಲವರು ವ್ಯಂಗ್ಯವಾಡುತ್ತಿದ್ದು ಯಾವ ಕಾರಣಕ್ಕೆ ನೈಟ್ ಕರ್ಫ್ಯೂ ಹೇರಲಾಗಿದೆ ಎಂದು ಕೇಳುತ್ತಿದ್ದಾರೆ. ಕೆಲವರಂತೂ ಈ ರೀತಿಯ ಸಲಹೆ ನೀಡಿದ ತಜ್ಞರು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುತಿದ್ದಾರೆ.
ಒಟ್ಟಿನಲ್ಲಿ ಯೋಚನೆ ಮಾಡುವ ಶಕ್ತಿಯನ್ನೇ ಕಳೆದುಕೊಂಡಂತಿರುವ ರಾಜ್ಯ ಸರಕಾರ ಅದ್ಯಾವಾಗ ನೈಟ್ ಕರ್ಫ್ಯೂವಿನಂತಹ ಅನಗತ್ಯ ನಿಯಮಗಳನ್ನು ತೆಗೆದುಹಾಕುತ್ತದೆಯೋ ಕಾದು ನೋಡೋಣ.












































