
ಬೆಂಗಳೂರು: ಬೈಕ್ ಸವಾರನೊಬ್ಬ ವೃದ್ಧರೊಬ್ಬರನ್ನು ಕಿಲೋ ಮೀಟರ್ ಗಟ್ಟಲೆ ರಸ್ತೆಯಲ್ಲಿ ಎಳೆದೊಯ್ದ ಹೇಯ ಹಾಗು ಭಯಾನಕ ಘಟನೆಗೆ ಇಂದು ಬೆಂಗಳೂರು ಸಾಕ್ಷಿಯಾಗಿದೆ. ದೆಹಲಿಯಲ್ಲಿ ಯುವತಿಯೊಬ್ಬಳನ್ನು ೧೨ ಕಿಲೋ ಮೀಟರ್ ಎಳೆದೊಯ್ದು ಕೊಂದ ಘಟನೆ ಬೆನ್ನಲ್ಲೇ ಅದನ್ನೇ ಹೋಲುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಒನ್ ವೇ ನಲ್ಲಿ ಬಂದು ನಿಂತಿದ್ದ ಬೊಲೆರೋಗೆ ಬೈಕ್ ಸವಾರ ಸಾಹಿಲ್ ಎಂಬಾತ ಢಿಕ್ಕಿ ಹೊಡೆದಿದ್ದು ಅದನ್ನು ಪ್ರಶ್ನಿಸಿದ ಬೊಲೇರೊದ ವೃದ್ಧ ಚಾಲಕನನ್ನು ಆತ ಕಿಮೀ ಗಟ್ಟಲೆ ಮೃಗೀಯವಾಗಿ ಎಳೆದೊಯ್ದು ರಾಕ್ಷಸೀತನ ಪ್ರದರ್ಶಿಸಿದ್ದಾನೆ.
ಬೆಂಗಳೂರಿನ ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಈ ಹೇಯ ಕೃತ್ಯ ನಡೆದಿದ್ದು, ಕುವೆಂಪು ಭಾಷಾಭಾರತಿ ಪ್ರಾಧಿಕಾರಗೆ ತೆರಳುತ್ತಿದ್ದ ಬೊಲೆರೋ ಚಾಲಕ 71 ವರ್ಷದ ಮುತ್ತಪ್ಪ ಅವರ ಕಾರಿಗೆ ಹೋಂಡಾ ಆಕ್ಟೀವಾದಲ್ಲಿ ಬಂದ ದ್ವಿಚಕ್ರ ಸವಾರ ಸಾಹಿಲ್ ಎಂಬಾತ ಡಿಕ್ಕಿ ಹೊಡೆದಿದ್ದು, ಈ ವೇಳೆ ಮಾತಿನ ಚಕಮಕಿ ನಡೆದಿದೆ. ಆಗ ದ್ವಿಚಕ್ರ ವಾಹನ ಚಾಲಕ ಸಾಹಿಲ್ ಬೈಕ್ ಏರಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ವೃದ್ಧ ಮುತ್ತಪ್ಪ ಅವರು ಆತನ ಗಾಡಿ ಹಿಡಿದುಕೊಂಡಿದ್ದಾರೆ. ಅದನ್ನು ನೋಡಿಯೂ ಕೂಡ ಆತ ಏಕಾಏಕಿ ಗಾಡಿ ಚಲಾಯಿಸಿಕೊಂಡು ಹೋಗಿದ್ದಾನೆ. ಬೈಕ್ ಓಡಿಸುತ್ತಿದ್ದಂತೆಯೇ ಮುತ್ತಪ್ಪ ಅವರು ಕೆಳಗೆ ಬಿದ್ದಿದ್ದು, ಆದರೂ ಆತ ಬೈಕ್ ನಿಲ್ಲಿಸಿಲ್ಲ.
ಈ ಭೀಕರ ದೃಶ್ಯ ಕಂಡ ದಾರಿಹೋಕರು ಆತನನ್ನು ನಿಲ್ಲಿಸಲು ಸೂಚಿಸಿದರೂ ಕೇಳದೆ ವೃದ್ಧನನ್ನು ಎಳೆದುಕೊಂಡೆ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಆಟೋ ಚಾಲಕ, ಮತ್ತೋರ್ವ ಬೈಕ್ ಸವಾರ ಮತ್ತು ಕ್ಯಾಬ್ ಚಾಲಕರೊಬ್ಬರು ಆತನ ಬೈಕ್ ಅನ್ನು ಬಲವಂತವಾಗಿ ನಿಲ್ಲಿಸಿದ್ದಾರೆ. ಬಳಿಕ ಗುಂಪುಸೇರಿದ ಸ್ಥಳೀಯರು ರಾಕ್ಷಸೀ ಬೈಕ್ ಚಾಲಕನನ್ನು ಥಳಿಸಿದ್ದಾರೆ. ಕೂಡಲೇ ಸ್ಟಾಹಲಕ್ಕೆ ಆಗಮಿಸಿದ ಮಾಗಡಿರಸ್ತೆ ಟ್ರಾಫಿಕ್ ಪೊಲೀಸರು ಜನರಿಂದ ಆರೋಪಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುತ್ತಪ್ಪ ಅವರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಫತ್ರೆ ಬಳಿ ರಾಕ್ಷಸೀ ಮನಸ್ಸಿನ ಸಾಹಿಲ್ ನ ತಾಯಿ ಬಂದಿದ್ದು ಮಾಧ್ಯಮದ ಕ್ಯಾಮೆರಾ ನೋಡಿ ಓಡಿ ಹೋಗಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL