
ದುಬೈ : ತಾಲಿಬಾನ್ ಅಫ್ಘಾನಿನ ಕಾಬೂಲ್ ಅನ್ನು ವಶಪಡಿಸಿಕೊಂಡ ಬಳಿಕ ದೇಶ ತೊರೆದು ಓಡಿಹೋಗಿದ್ದ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದುಬೈನಲ್ಲಿ ಪತ್ತೆಯಾಗಿದ್ದು, ಘನಿ ಅವರಿಗೆ ಯುಎಇ ಮಾನವೀಯ ನೆಲೆಯಲ್ಲಿ ಆಶ್ರಯ ನೀಡಿದೆ.
ಭಾನುವಾರ ತಾಲಿಬಾನಿಗಳು ಕಾಬೂಲ್’ನತ್ತ ಬರುತ್ತಿದ್ದಂತೆ ತನ್ನ ಕುಟುಂಬದೊಂದಿಗೆ ಪಲಾಯನಗೈದಿದ್ದ ಘನಿ ತಜಕಿಸ್ತಾನ್ ಹೋಗುತ್ತಾರೆ ಎನ್ನಲಾಗಿತ್ತು. ಆದರೆ ಅಲ್ಲಿನ ಸರಕಾರ ಅವಕಾಶ ಕೊಡದ ಕಾರಣ ಯುಎಇ ಸಹಕಾರ ಕೋರಿ ದುಬೈಗೆ ಬಂದಿದ್ದಾರೆ. ಅಶ್ರಫ್ ಘನಿ ಅವರು ದೇಶ ಬಿಡುವ ವೇಳೆ, ‘ತಾಲಿಬಾನಿಗಳು ಗೆದ್ದಿದ್ದಾರೆ. ರಕ್ತಪಾತ ತಪ್ಪಿಸುವ ಸಲುವಾಗಿ ದೇಶ ತೊರೆಯುತ್ತೇನೆ’ ಎಂದು ತನ್ನ ಫೇಸ್ಬುಕ್ ಅಲ್ಲಿ ಬರೆದುಕೊಂಡಿದ್ದರು.
ಯುಎಇಯ ವಿದೇಶಾಂಗ ಹಾಗು ಅಂತರರಾಷ್ಟ್ರೀಯ ಸಹಕಾರಗಳ ಸಚಿವಾಲಯ ಮಾನವೀಯ ನೆಲೆಯಲ್ಲಿ ಅಫ್ಘಾನ್ ನಿರ್ಗಮಿತ ಅಧ್ಯಕ್ಷ ಅಶ್ರಫ್ ಘನಿ ಹಾಗು ಅವರ ಕುಟುಂಬಕ್ಕೆ ಆಶ್ರಯ ನೀಡಿರುವುದನ್ನು ದೃಡೀಕರಿಸುತ್ತೇವೆ ಎಂದು ಯುಎಇ ಹೇಳಿಕೆಯಲ್ಲಿ ತಿಳಿಸಿದೆ. ಜತೆಗೆ ಅವರನ್ನು ದೇಶಕ್ಕೆ ಸ್ವಾಗತಿಸುತ್ತಿರುವುದಾಗಿ ಹೇಳಿಕೊಂಡಿದೆ.
ಮಂಗಳವಾರ ಅಫ್ಘಾನಿಸ್ತಾನದ ಮಾಜಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಖಾನ್ ಮೊಹಮ್ಮದಿ ಅವರು ‘ದೇಶಕ್ಕೆ ದ್ರೋಹ ಬಗೆದು ಪಲಾಯನ ಮಾಡಿರುವ ಅಶ್ರಫ್ ಘನಿಯನ್ನು ಪತ್ತೆ ಹಚ್ಚಲು ಇಂಟರ್ಪೋಲ್ ನೆರವು ನೀಡಬೇಕು ಮತ್ತು ಶಿಕ್ಷಿಸಬೇಕು’ ಎಂದು ಒತ್ತಾಯಿಸಿದ್ದರು. ಪಲಾಯನದ ವೇಳೆ ಅಧ್ಯಕ್ಷ ಅಶ್ರಫ್ ಘನಿ ನಾಲ್ಕು ಕಾರುಗಳ ತುಂಬಾ ಹಣ ತುಂಬಿಸಿಕೊಂಡು ಹೋಗಿದ್ದಾರೆ ಅನ್ನುವ ಸುದ್ದಿ ಕೂಡ ಹರಿದಾಟಿತ್ತು.












































