
ಬಾರಾಮುಲ್ಲಾ: ಐವರು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರ ಬಂಧನದೊಂದಿಗೆ ಬಾರಾಮುಲ್ಲಾದಲ್ಲಿ ಮಂಗಳವಾರ ಮದ್ಯದಂಗಡಿ ಮೇಲೆ ನಡೆದ ಗ್ರೆನೇಡ್ ದಾಳಿ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಉಗ್ರರಿಂದ ಹಲವು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳವಾರ ಬುರ್ಖಾಧಾರಿ ಭಯೋತ್ಪಾದಕರು ಹೊಸದಾಗಿ ತೆರೆಯಲಾದ ಮದ್ಯದ ಅಂಗಡಿಯೊಳಗೆ ಗ್ರೆನೇಡ್ ಅನ್ನು ಎಸೆದಿದ್ದರು. ಈ ಧಾಳಿಯಲ್ಲಿ ಒಬ್ಬ ಉದ್ಯೋಗಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದರು.
ಬಂಧನ ಮಾಹಿತಿಯನ್ನು ಖಚಿತಪಡಿಸಿದ ಐಜಿಪಿ ಕಾಶ್ಮೀರ ವಿಜಯ್ ಕುಮಾರ್, ಐವರು ಭಯೋತ್ಪಾದಕರ ಪೈಕಿ ಒಬ್ಬ ಭಯೋತ್ಪಾದಕ ಸಂಘಟನೆಯ ನೇರ ಸದಸ್ಯ ಎಂದು ಹೇಳಿದ್ದಾರೆ. ಅವರ ಬಳಿಯಿದ್ದ ಐದು ಪಿಸ್ತೂಲ್ಗಳು, 23 ಗ್ರೆನೇಡ್ಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಉಗ್ರಗಾಮಿಗಳ ತಂಡವು ಬಾರಾಮುಲ್ಲಾದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದೆ ಎಂದು ಐಜಿಪಿ ಹೇಳಿದರು.
ಬುರ್ಖಾಧಾರಿ ಭಯೋತ್ಪಾದಕರು ಎರಡು ಮೋಟಾರ್ ಸೈಕಲ್ಗಳಲ್ಲಿ ಮದ್ಯದ ಅಂಗಡಿಗೆ ಬಂದು ನೌಕರನನ್ನು ಕೊಂದಿದ್ದರು. ಮದ್ಯದ ಅಂಗಡಿಯ ರಂಜಿತ್ ಸಿಂಗ್ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ. ಈ ದಾಳಿಯು ಜಮ್ಮು ವಿಭಾಗದಲ್ಲಿ ಆಕ್ರೋಶವನ್ನು ಉಂಟುಮಾಡಿತ್ತು ಮತ್ತು ಕೋಪಗೊಂಡ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರು.