
ಅಹಮದಾಬಾದ್: ಬಿಜೆಪಿ ಅಥವಾ ಆಮ್ ಆದ್ಮಿ ಪಕ್ಷ ಸೇರುವ ಬಗ್ಗೆ ಇನ್ನೂ ಚಿಂತಿಸಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇದ್ದು ನನ್ನ ಬದುಕಿನ ಅಮೂಲ್ಯ 3 ವರ್ಷಗಳು ವ್ಯರ್ಥವಾದವು ಎಂದು ಬುಧವಾರ ಕಾಂಗ್ರೆಸ್ ಪಕ್ಷದ ಗುಜರಾತ್ ಘಟಕದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಗುಜರಾತಿನ ಬಲಿಷ್ಠ ಪಾಟೀದಾರ್ ಸಮುದಾಯಕ್ಕೆ ಸೇರಿದ ಹಾರ್ದಿಕ್ ಪಟೇಲ್ ಈ ಹಿಂದೆ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಹೋರಾಟ ನಡೆಸಿ ರಾಜಕೀಯಕ್ಕೆ ಪದಾರ್ಪಣೆಗೈದಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕಾರ್ಯಾಧ್ಯಕ್ಷರಾಗಿದ್ದರು. ಕಾಂಗ್ರೆಸ್ ಕೇಂದ್ರ ನಾಯಕರೊಡಗಿನ ಭಿನ್ನಮತದಿಂದಾಗಿ ಇದೀಗ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿದ ಹಾರ್ದಿಕ್ ಪಟೇಲ್ ಅವರು ಅಯೋಧ್ಯಾ ವಿಷಯದಲ್ಲಿ ಬಿಜೆಪಿಯ ಬದ್ಧತೆ ಹಾಗು ಜಮ್ಮು ಕಾಶ್ಮೀರದಲ್ಲಿ ಕಲಾಂ 370 ಅನ್ನು ತೆಗೆದು ಹಾಕಿದ್ದನ್ನು ಪ್ರಶಂಶಿಸಿದರು. ಈ ಮೂಲಕ ಬಿಜೆಪಿ ಮೇರೇ ಹರಿ ಹಾಯುತ್ತಿದ್ದ ಹಾರ್ದಿಕ್ ಪಟೇಲ್ ಕೇಸರಿ ಪಕ್ಷದ ಮೇಲೆ ಪ್ರೀತಿ ತೋರಿಸುವ ಯತ್ನ ಹಾಗು ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವ ಸಾಧ್ಯತೆಯನ್ನು ಮುಕ್ತವಾಗಿಟ್ಟರು.