ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸ್ವಾತಂತ್ರದ ವರ್ಷ ತಿಳಿದಿಲ್ಲದ್ದಕ್ಕೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದಿದ ಕೇಂದ್ರ ಸಚಿವ ನಾರಾಯಣ ರಾಣೆಯವರನ್ನು ಎಫ್ಐಆರ್ ದಾಖಲಿಸಿ ಬಂಧಿಸಿದ ಬೆನ್ನಲ್ಲೇ ಈಗ ಸ್ವತಃ ಉದ್ಧವ್ ಠಾಕ್ರೆ ಈ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದಿದ್ದ ವಿಡಿಯೋ ವೈರಲ್ ಆಗುತ್ತಿದೆ.

ಉದ್ಧವ್ ಅವರು 2018ರಲ್ಲಿ ಮಾಡಿದ ಭಾಷಣದ ವಿಡಿಯೋ ಈಗ ಮಹತ್ವ ಪಡೆದಿದ್ದು ಅದರಲ್ಲಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಚಪ್ಪಲಿಯಿಂದ ಹೊಡೆಯಬೇಕು ಎಂದಿದ್ದರು.
“ನೋಡಿ ಯೋಗಿ ಉಬ್ಬಿದ ಬಲೂನ್ ರೀತಿ ಆಗಿದ್ದಾರೆ. ಗಾಳಿ ತುಂಬಿದ ಬಲೂನ್ ಮೇಲೆ ಮೇಲೆ ಹೋಗುತ್ತಿರುತ್ತೆ. ಯೋಗಿಯೂ ಹಾಗೆಯೆ. ಅವರು ಬಂಡ ಕೂಡಲೇ ನೇರವಾಗಿ ಶಿವಾಜಿ ಮಹಾರಾಜರ ಫೋಟೋದ ಬಳಿ ಹಾರ ಹಾಕಲು ಹೋದರು. ಆದರೆ ಆಗ ಅವರ ಕಾಲಲ್ಲಿ ಚಪ್ಪಲಿಯಿತ್ತು. ಚಪ್ಪಲಿ ಧರಿಸಿ ಆ ಫೋಟೋದ ಮುಂದೆ ನಿಲ್ಲಬಹುದೇ. ಅವರನ್ನು ಅದೇ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಅನಿಸುತ್ತದೆ. ಯೋಗಿ ಆದಿತ್ಯನಾಥ್ ಮಹಾರಾಜರ ಮುಂದೆ ನಿಲ್ಲುವ ಅರ್ಹತೆ ಹೊಂದಿದ್ದಾರೆಯೇ” ಎಂದು ಅಂದು ಉದ್ಧವ್ ಠಾಕ್ರೆ ಹೇಳಿದ್ದರು.
ಈ ಬಗ್ಗೆ ಕೇಸು ದಾಖಲಿಸಿ ಎಫ್ಐಆರ್ ಮಾಡಲು ಬಿಜೆಪಿಯ ಯವತ್ಮಲ್ ಜಿಲ್ಲಾ ಅಧ್ಯಕ್ಷ ನಿತಿನ್ ಭೂತಾಡ ಒತ್ತಾಯಿಸಿದ್ದಾರೆ. ಶಿವಸೇನೆಯ ಮುಖ್ಯಸ್ಥರಾಗಿರುವ ಠಾಕ್ರೆ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.