National

ಬಿಹಾರ: ಪ್ರತಿಭಟನಾನಿರತ ರೈಲ್ವೆ ಉದ್ಯೋಗ ಆಕಾಂಕ್ಷಿಗಳಿಂದ ರೈಲಿಗೆ ಬೆಂಕಿ, ಕಲ್ಲು ತೂರಾಟ

ಪಾಟ್ನಾ: ಬಿಹಾರದ ಗಯಾ ರೈಲು ನಿಲ್ದಾಣದಲ್ಲಿ ರೈಲ್ವೆ ಉದ್ಯೋಗಕ್ಕಾಗಿ ಪ್ರತಿಭಟಿಸುತ್ತಿದ್ದ ಆಕಾಂಕ್ಷಿಗಳ ಗುಂಪೊಂದು ರೈಲಿಗೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚುವ ಕೆಲಸ ಮಾಡಿದೆ. ಈ ಮೂಲಕ ಬಿಹಾರದಲ್ಲಿ ತಾಂತ್ರಿಕೇತರ ವರ್ಗಗಳ (ಎನ್‌ಟಿಪಿಸಿ) ರೈಲ್ವೆ ನೇಮಕಾತಿ ಮಂಡಳಿಯ ಎರಡು ಹಂತದ ಪರೀಕ್ಷೆಯ ವಿರುದ್ಧ ಹಾಗು ಪರೀಕ್ಷೆಯಲ್ಲಿನ ಅಕ್ರಮವನ್ನು ಖಂಡಿಸಿ ಕಳೆದ ಮೂರು ದಿನಗಳಿಂದ ಉದ್ಯೋಗ ಆಕಾಂಕ್ಷಿಗಳು ನಡೆಸುತ್ತಿದ್ದ ಪ್ರತಿಭಟನೆ ಬುಧವಾರ ಹಿಂಸಾಚಾರಕ್ಕೆ ತಿರುಗಿದೆ.

ಘಟನೆ ಬೆನ್ನಲ್ಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿಭಟನಾ ನಿರತರಿಗೆ ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಪ್ರಿಯ ವಿದ್ಯಾರ್ಥಿಗಳೇ ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ರೈಲ್ವೆ ನಿಮ್ಮ ಆಸ್ತಿ, ದಯವಿಟ್ಟು ಅದನ್ನು ನಾಶಪಡಿಸಬೇಡಿ. ನಿಮ್ಮ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಆರಂಭದಲ್ಲಿ ಪ್ರತಿಭಟನಾನಿರತರು ರೈಲಿಗೆ ಕಲ್ಲು ತೂರಾಟ ನಡೆಸಿದರು ನಂತರ ರೈಲ್ವೆ ಕೋಚ್‌ ಒಂದಕ್ಕೆ ಬೆಂಕಿ ಹಚ್ಚಿದರು ಎಂದು ಗಯಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಕುಮಾರ್ ಅವರು ತಿಳಿಸಿದ್ದಾರೆ. ಬೆಂಕಿ ಹಚ್ಚಿದ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಹೊತ್ತಿ ಉರಿಯುತ್ತಿದ್ದ ರೈಲಿನ ಬೋಗಿಗಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

Exit mobile version