National

ಬಾಂಗ್ಲಾದೇಶದ ಹಿಂದೂಗಳ ಸಮಸ್ಯೆಗಳನ್ನು ನಿಭಾಯಿಸಲು ಸಿಎಎ ಉಪಯೋಗವಾಗದು: ಬಾಂಗ್ಲಾ ಹಿಂದೂ ನಾಯಕ

ಢಾಕಾ: ಬಾಂಗ್ಲಾದೇಶದ ಹಿಂದೂ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಭಾರತದ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) “ಸಹಾಯಕವಾಗಿಲ್ಲ” ಎಂದು ಬಾಂಗ್ಲಾ ದೇಶದ ಪ್ರಮುಖ ಹಿಂದೂ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ನಾವು ಸಿಎಎಯನ್ನು ಸ್ವಾಗತಿಸುವುದಿಲ್ಲ. ಅಂತಹ ಶಾಸನವು ಬಾಂಗ್ಲಾ ಹಿಂದುಗಳಿಗೆ ಸಹಾಯಕವಾಗದ ಕಾರಣ ನಾವು ಈ ಕಾನೂನಿನ ಪರವಾಗಿಲ್ಲ ಎಂದು ಬಾಂಗ್ಲಾ ಹಿಂದೂ ನಾಯಕ ಮೊನೀಂದ್ರ ಕುಮಾರ್ ನಾಥ್ ಹೇಳಿದರು.

ದೇಶದ 64 ಜಿಲ್ಲೆಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನೋಡಿಕೊಳ್ಳುವ ಬಾಂಗ್ಲಾದೇಶದ ಪೂಜಾ ಉದ್ಜಪನ್ ಪರಿಷತ್ತಿನ ಉಪಾಧ್ಯಕ್ಷ ಮೊನೀಂದ್ರ ಕುಮಾರ್ ನಾಥ್, “ಬಾಂಗ್ಲಾದ ಶೇಖ್ ಹಸೀನಾ ಸರ್ಕಾರವು ಅಲ್ಪಸಂಖ್ಯಾತರಿಗೆ ಹೆಚ್ಚು ಸ್ನೇಹಪರವಾಗಿದ್ದು ಮತ್ತು ದೇವಾಲಯಗಳ ಮೇಲಿನ ದಾಳಿಗಳು ಮತ್ತು ಅಲ್ಪಸಂಖ್ಯಾತರಿಂದ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ತಡೆಯುವಲ್ಲಿ ನೆರವಾಗುತ್ತಿದೆ” ಎಂದು ಹೇಳಿದರು.

“ಜನರು ತೀವ್ರವಾದ ಚಿತ್ರಹಿಂಸೆ ಅಥವಾ ದಾಳಿಯನ್ನು ಎದುರಿಸಿದಾಗ ಮಾತ್ರ ತಮ್ಮ ತಾಯ್ನಾಡನ್ನು ತೊರೆಯಲು ಬಯಸುತ್ತಾರೆ. ಬಾಂಗ್ಲಾದೇಶ ನಮ್ಮ ಜನ್ಮಸ್ಥಳ ಮತ್ತು ನಾವು ಇಲ್ಲಿಯೇ ಉಳಿಯಬೇಕು. ಹಾಗಾಗಿ ನಾವು ಇಲ್ಲಿಯೇ ಉಳಿಯಲು ಮತ್ತು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಬಯಸುತ್ತೇವೆ” ಎಂದು ಅವರು ಹೇಳಿದರು.

ಬಾಂಗ್ಲಾದ ಢಾಕೇಶ್ವರಿ ದೇವಸ್ಥಾನದಲ್ಲಿ ಭಾರತೀಯ ಪತ್ರಕರ್ತರೊಂದಿಗೆ ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಾ ಮೊನಿಂದ್ರ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನಾಥ್ ಅವರು ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್‌ನ ಜಂಟಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

Exit mobile version