
ಅಗರ್ತಲಾ: ಬಿಜೆಪಿ ರಾಜ್ಯಾಧ್ಯಕ್ಷ ಮಾಣಿಕ್ ಸಹಾ ಅವರು ಭಾನುವಾರ ಬೆಳಗ್ಗೆ ತ್ರಿಪುರಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಎಸ್.ಎನ್. ಆರ್ಯ ಅವರು ಅಗರ್ತಲಾದ ರಾಜಭವನದಲ್ಲಿ ರಾಜ್ಯಸಭಾ ಸಂಸದರಾದ ಶ್ರೀ ಸಹಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮಾಣಿಕ್ ಸಹಾ ಅವರು ತ್ರಿಪುರಾದ 11ನೇ ಮುಖ್ಯಮಂತ್ರಿಯಾಗಿದ್ದಾರೆ.
ಶನಿವಾರ ಸಂಜೆ ಹಠಾತ್ ರಾಜೀನಾಮೆ ನೀಡಿದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇಬ್, ಬಿಜೆಪಿ ಶಾಸಕರು ಮತ್ತು ರಾಜ್ಯ ಸಚಿವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೇಂದ್ರದ ಪರವಾಗಿ ಸಚಿವೆ ಪ್ರತಿಮಾ ಭೌಮಿಕ್ ಅವರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶನಿವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಹಾ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿರುವುದನ್ನು ವಿರೋಧಿಸಿದ್ದ ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಮತ್ತು ಸಚಿವ ರಾಮ್ ಪ್ರಸಾದ್ ಪಾಲ್, ಪ್ರಮಾಣ ವಚನ ಸಮಾರಂಭ ಮುಗಿದ ಕೆಲವೇ ಕ್ಷಣಗಳಲ್ಲಿ ರಾಜಭವನಕ್ಕೆ ಆಗಮಿಸಿದರು. ತ್ರಿಪುರ ಬಿಜೆಪಿಯೊಳಗೆ ಅಸಮಾಧಾನ ಒಳಗೊಳಗೇ ಕುದಿಯುತ್ತಿದ್ದು ಮುಂದಿನ ವರ್ಷದ ಚುನಾವಣೆಯ ಒಳಗೆ ಏನು ಬದಲಾವಣೆಗಳು ಆಗಲಿದೆಯೋ ಕಾದು ನೋಡಬೇಕು.