
ಭುವನೇಶ್ವರ: ಕಾಡಿನಲ್ಲಿ ತಯಾರಿಸುತ್ತಿದ್ದ ಮದ್ಯ ಕುಡಿದು ಬರೋಬ್ಬರಿ ೨೪ ಆನೆಗಳು ಅಮಲೇರಿ ಕುಂಭಕರ್ಣ ನಿದ್ದೆಗೆ ಜಾರಿ ಗಂಟೆಗಟ್ಟಲೆ ಏಳದೆ ಪಜೀತಿ ಸೃಷ್ಟಿಸಿದ ಘಟನೆ ಭುವನೇಶ್ವರದಲ್ಲಿ ನಡೆದಿದೆ. ಬರೋಬ್ಬರಿ 24 ಆನೆಗಳು ಕ್ಯೋಂಜಾರ್ ಜಿಲ್ಲೆಯ ಶಿಲಿಪಾದ ಗ್ರಾಮದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸ್ಥಳೀಯವಾಗಿ ತಯಾರಿಸಲಾಗುವ “ಮಹುವಾ’ ಎಂಬ ಮದ್ಯವನ್ನು ಸೇವಿಸಿವೆ.
ಮದ್ಯ ಸೇವಿಸಿದ್ದೇ ತಡ, ಆನೆಗಳನ್ನು ನಿದ್ರಾದೇವಿ ಆವರಿಸಿಬಿಟ್ಟಿದ್ದಾಳೆ. ಗಂಟೆಗಟ್ಟಲೆ ಆನೆಗಳು ನಿದ್ದೆಗೆ ಜಾರಿದ್ದು ಏಳದೆ ಆತಂಕ ಸೃಷ್ಟಿಸಿದ್ದವು.
ಮಾಹಿತಿ ಪ್ರಕಾರ ‘ಮದ್ಯ’ ತಯಾರಿ ಪೂರ್ತಿಯಾಗಿರಲಿಲ್ಲ. ಆದರೂ, ಆನೆಗಳು ಅದನ್ನು ಸೇವಿಸಿದ್ದವು. ಅವುಗಳನ್ನು ಎಚ್ಚರಿಸಲು ಪ್ರಯತ್ನ ಮಾಡಿದರೂ ಅದು ಸಫಲವಾಗಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ, ಅವರು ಬಂದು ತಮಟೆ ಬಡಿದು ಆನೆಗಳನ್ನು ಎಬ್ಬಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL













































