
ಹೊಸದಿಲ್ಲಿ: 2023 ನೇ ಸಾಲಿನ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿಗಳ ಪಟ್ಟಿಯನ್ನು ಕೇಂದ್ರ ಸರಕಾರವು ಇಂದು (ಬುಧವಾರ) ಪ್ರಕಟಿಸಿದೆ. ಒಟ್ಟು 106 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದ್ದು ಅದರಲ್ಲಿ ಆರು ಸಾಧಕರಿಗೆ ಪದ್ಮ ವಿಭೂಷಣ, ಒಂಭತ್ತು ಸಾಧಕರಿಗೆ ಪದ್ಮ ಭೂಷಣ ಹಾಗೂ 91 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಕರ್ನಾಟಕದಿಂದ ಹಿರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ, ಮಾಜಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವರೂ ಆಗಿರುವ ಪ್ರಸ್ತುತ ಬಿಜೆಪಿಯಲ್ಲಿರುವ ಎಸ್.ಎಂ.ಕೃಷ್ಣ ಅವರಿಗೆ ‘ಪದ್ಮ ವಿಭೂಷಣ’ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸಮಾಜ ಸೇವಕಿ ಇನ್ಫೋಸಿಸ್ ನ ಸುಧಾಮೂರ್ತಿ ಹಾಗು ಕನ್ನಡದ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ‘ಪದ್ಮ ಭೂಷಣ’ ಪ್ರಶಸ್ತಿ ನೀಡಲಾಗಿದೆ.
ಪದಮ ವಿಭೂಷಣ ಈ ಬಾರಿ ಒಟ್ಟು 6 ಮಂದಿಗೆ ನೀಡಲಾಗಿದೆ. ಉತ್ತರ ಪದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, ಸಂಗೀತ ಕ್ಷೇತ್ರದ ಜಾಕಿರ್ ಹುಸೇನ್, ದಿಲೀಪ್ ಮಹಾಲನಾಬಿಸ್, ಗಣಿತ ತಜ್ಞ ಶ್ರೀನಿವಾಸ್ ವರದನ್, ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಸೇರಿ 6 ಮಂದಿ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2023 ನೇ ಸಾಲಿನ ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಎಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.