
ಜಮ್ಮು ಮತ್ತು ಕಾಶ್ಮೀರ: ಕಾಶ್ಮೀರ ಕಣಿವೆಯ ಕುಲ್ಗಾಮ್ನಲ್ಲಿ ಜಮ್ಮುವಿನ ಸಾಂಬಾ ಜಿಲ್ಲೆಯ ಹಿಂದೂ ಶಿಕ್ಷಕರೊಬ್ಬರನ್ನು ಮಂಗಳವಾರ ಬೆಳಗ್ಗೆ ಉಗ್ರರು ಶಾಲೆಯ ಹೊರಗೆ ಗುಂಡಿಕ್ಕಿ ಕೊಂದಿದ್ದಾರೆ. ಉಗ್ರರ ಟಾರ್ಗೆಟ್ ಹತ್ಯೆಗಳಿಂದ ಕಣಿವೆಯಲ್ಲಿ ಈ ತಿಂಗಳು ಏಳು ನಾಗರಿಕರು ಸಾವಿಗೀಡಾಗಿದ್ದಾರೆ. ಈ ಮಧ್ಯೆ ಭೀತಿಯಿಂದ ಬದುಕುತ್ತಿರುವ ಕಾಶ್ಮೀರಿ ಪಂಡಿತರು ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಉಗ್ರರಿಂದ ಅಮಾಯಕರ ಸಾವಿಗೆ 24 ಗಂಟೆಯೊಳಗೆ ಕಠಿಣ ಕ್ರಮವನ್ನು ಜರಗಿಸಲು ಸರ್ಕಾರ ವಿಫಲವಾದಲ್ಲಿ ಸಾಮೂಹಿಕವಾಗಿ ವಲಸೆ ಹೋಗುವುದಾಗಿ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಕುಲ್ಗಾಮ್ನ ಗೋಪಾಲ್ಪೋರಾದ ಸರ್ಕಾರಿ ಪ್ರೌಢಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಬೆಳಿಗ್ಗೆ ಅಸೆಂಬ್ಲಿ ಮುಗಿಸಲು ಮುಂದಾದಾಗ ಈ ಹತ್ಯೆ ನಡೆದಿದೆ. ಉಗ್ರರು ರಜನಿ ಬಾಲಾ (36) ಅವರ ಮೇಲೆ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಕುಲ್ಗಾಮ್ ಪಟ್ಟಣದಿಂದ ಎಂಟು ಕಿ.ಮೀ ದೂರದಲ್ಲಿ ತೋಟಗಳಿರುವ ಏಕಾಂತ ಸ್ಥಳದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದ ಕಾಶ್ಮೀರಿ ಪಂಡಿತರ ನಿಯೋಗ, ಕಾಶ್ಮೀರದಲ್ಲಿ ಸಹಜ ಪರಿಸ್ಥಿತಿ ಬರುವವರಿಗೆ 2-3 ವರ್ಷ ಬೇರಡೆಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. 24 ಗಂಟೆಯೊಳಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವು ಸಾಮೂಹಿಕವಾಗಿ ಕಣಿವೆ ಪ್ರದೇಶ ತೊರೆಯುತ್ತೇವೆ, ಮತ್ತೊಮ್ಮೆ ಸಾಮೂಹಿಕವಾಗಿ ವಲಸೆ ಹೋಗುವುದಾಗಿ ಪ್ರತಿಭಟನಾಕಾರರಲ್ಲಿ ಒಬ್ಬರಾದ ಅಮಿತ್ ಕೌಲ್ ಅವರು ಹೇಳಿದರು.
ಪಂಡಿತರ ಪರಿಹಾರ ಶಿಬಿರಗಳಲ್ಲಿ ಕೇವಲ 1,250 ಜನರಿಗೆ ಮಾತ್ರ ವಸತಿ ಕಲ್ಪಿಸಲಾಗಿದೆ. ಉಳಿದ 4,000 ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಮಿತ್ ಕೌಲ್ ಹೇಳಿದರು.
ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd