National

107 ಸಾಧಕರಿಗೆ ಪದ್ಮಶ್ರೀ, ಜನರಲ್ ರಾವತ್, ಕಲ್ಯಾಣ್ ಸಿಂಗ್ ಪದ್ಮವಿಭೂಷಣ: ದಕ್ಷಿಣ ಕನ್ನಡದ ಮಹಾಲಿಂಗ ನಾಯ್ಕರಿಗೆ ಪದ್ಮಶ್ರೀ

ನವದೆಹಲಿ: ಈ ಬಾರಿಯ 73ನೇ ವರ್ಷದ ಗಣರಾಜ್ಯೋತ್ಸವದ ಅಂಗವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮವಿಭೂಷಣ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ಮಂಗಳವಾರ ಪ್ರಕಟಿಸಲಾಗಿದೆ. ಕರ್ನಾಟಕದ ಐದು ಮಂದಿ ಸೇರಿದಂತೆ ಒಟ್ಟು 107 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. 17 ಮಂದಿಗೆ ಪದ್ಮ ಭೂಷಣ ಹಾಗು 4 ಮಂದಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ.

ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರಿಗೆ ಹಾಗು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಕಲ್ಯಾಣ್ ಸಿಂಗ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಪದ್ಮ ಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕರ್ನಾಟಕದ ಒಟ್ಟು 5 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದು ಕೃಷಿ ಕ್ರೇತ್ರದ ಸಾಧನೆಗಾಗಿ ದಕ್ಷಿಣ ಕನ್ನಡದ ವಿಟ್ಲದ ಅಮೈ ಮಹಾಲಿಂಗ ನಾಯ್ಕ ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ.

ಉಳಿದಂತೆ ರಾಜ್ಯದ ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರವಾಗಿ ಪದ್ಮಶ್ರಿ ನೀಡಲಾಗಿದೆ. ಕಲಾ ವಿಭಾಗದಲ್ಲಿ ಎಚ್ ಆರ್ ಕೇಶವಮೂರ್ತಿ, ವಿಜ್ಞಾನ ವಿಭಾಗದಲ್ಲಿ ಸುಬ್ಬಣ್ಣ ಅಯ್ಯಪ್ಪಣ್ಣ, ಕೃಷಿ ಸಂಶೋಧನೆಯಲ್ಲಿ ಅಬ್ದುಲ್ ಖಾದರ್ ನಡಕಟ್ಟಿನ್ ಇವರುಗಳು ಈ ಬಾರಿಯ ಪದ್ಮಶ್ರೀ ಪುರಸ್ಕೃತ ಕನ್ನಡಿಗರು.

ಕೋವಿಡ್ ಲಸಿಕೆ ತಯಾರಕರಾದ ಕೃಷ್ಣ ಎಲ್ಲಾ, ಸುಚಿತ್ರಾ ಎಲ್ಲಾ, ಸೈರಸ್ ಪೂನವಾಲಾ, ಕಮ್ಯುನಿಷ್ಟ್ ನಾಯಕ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯಾ, ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾಡೆಲ್ಲಾ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಪದ್ಮ ಪ್ರಶಸ್ತಿ ಪಡೆದ ಪ್ರಮುಖರುಗಳು.

Exit mobile version