
ನವದೆಹಲಿ: ಭಾರತವನ್ನು ವಿಶ್ವಗುರು ಮಾಡುತ್ತೇವೆ ಎನ್ನುತ್ತಾ ಚುನಾವಣೆಯಲ್ಲಿ ಓಟಿನ ಸುರಿಮಳೆ ಗಳಿಸಿಕೊಂಡ ಪಕ್ಷದ ಸರಕಾರವೊಂದು ಪುಟ್ಟ ಪುಟ್ಟ 4-5 ಅರಬ್ ರಾಷ್ಟ್ರಗಳ ಮುಂದೆ ವಿಶ್ವಗುರು ಭಾರತವನ್ನು ಮಂಡಿಯೂರುವಂತೆ ಮಾಡಿದ್ದು ಮಾತ್ರ ವಿಷಾದನೀಯ. ಪ್ರವಾದಿ ವಿರುದ್ಧ ಹೇಳಿಕೆ ನೀಡಿದರೆಂಬ ವಿಷಯವನ್ನು ಸರಿಯಾಗಿ ನಿರ್ವಹಿಸದೇ ತನ್ನದೇ ಪಕ್ಷದ ವಕ್ತಾರೆಯನ್ನೇ ಬಲಿಕೊಟ್ಟು ಆಕೆ ಮಾತನಾಡಿದ ವಿಷಯದ ಕಾರಣಗಳನ್ನು ವಿಶ್ವದ ಮುಂದೆ ತೆರೆದಿಡುವ ಪ್ರಯತ್ನ ಮಾಡದೆ ಕ್ಷಮೆಯಾಚಿಸಿದ್ದು ಹಲವರಿಗೆ ಅದರಲ್ಲೂ ಸ್ವತಃ ಬಿಜೆಪಿ ಕಾರ್ಯಕರ್ತರಿಗೆ ಇರುಸುಮುರುಸು ಉಂಟು ಮಾಡಿದ್ದು ಸುಳ್ಳಲ್ಲ. ಇದನ್ನು ದೇಶದ ಬಹುದೊಡ್ಡ ರಾಜತಾಂತ್ರಿಕ ವೈಫಲ್ಯ ಎಂದೇ ಕರೆಯಲಾಗಿದೆ.
ಪ್ರವಾದಿ ಕುರಿತ ಹೇಳಿಕೆ ನೀಡಿದ್ದು ಬಿಜೆಪಿ ಪಕ್ಷದ ದೆಹಲಿ ಘಟಕದ ವಕ್ತಾರೆ. ಹಾಗಂತ ಅದನ್ನು ಭಾರತ ಸರಕಾರದ ಹೇಳಿಕೆ ಎಂಬಂತೆ ಬಿಂಬಿಸಿ ತಾನು ಕ್ಷಮೆ ಕೇಳುವ ಅಗತ್ಯ ಇರಲಿಲ್ಲ. ಅರಬ್ ರಾಷ್ಟ್ರಗಳ ಟೂಲ್ ಕಿಟ್ ಪ್ರತಿಭಟನೆಗೆ ಭಾರತದಂತಹ ಬಲಾಢ್ಯ ರಾಷ್ಟ್ರ ತಲೆತಗ್ಗಿಸಿದ್ದೇ ಒಂದು ಆಶ್ಚರ್ಯ. ಜ್ಞಾನವ್ಯಾಪಿ ಮಸೀದಿಯಲ್ಲಿ ದೊರಕಿದ ಶಿವಲಿಂಗದ ಬಗ್ಗೆ ಮುಸ್ಲಿಂ ಪಂಡಿತರಿಂದ ಬಂದ ಟೀಕೆ, ಕುಹಕದ ಹೇಳಿಕೆಗಳು, ದೇವ ನಿಂದನೆಗಳ ಸಂದರ್ಭ ಏನೂ ಕ್ರಮ ಕೈಗೊಳ್ಳದ ಬಿಜೆಪಿ ನೇತೃತ್ವದ ಸರಕಾರ, ಈಗ ಅದನ್ನೇ ಪ್ರಶ್ನಿಸಿ ಮಾತಿನ ಭರದಲ್ಲಿ ಪ್ರವಾದಿಯನ್ನು ಎಳೆದು ತಂದ ನೂಪುರ್ ಶರ್ಮ ಎಂಬ ಹೆಣ್ಣು ಮಗಳ ಮೇಲೆಯೇ ಹರಿ ಹಾಯ್ದು ಬಿದ್ದು ಬಿಜೆಪಿ ಪಕ್ಷದಿಂದಲೇ ಅಮಾನತು ಮಾಡಿ ವ್ಯಾಪಾರ-ಲಾಭದ ವಿಷಯ ಬಂದಾಗ ಯಾವುದೇ ಸಿದ್ಧಾಂತಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಸೂಚ್ಯವಾಗಿ ಸೂಚಿಸಿದೆ. ಹಿಂದುತ್ವ ಹಾಗು ಬಿಜೆಪಿ ಎರಡೂ ಒಂದೇ ತಟ್ಟೆಯಲ್ಲಿ ತೂಗುವುದಿಲ್ಲ ಎಂಬುದು ಇದರಿಂದ ಮತ್ತೆ ಸಾಬೀತಾದಂತಾಗಿದೆ.
ಭಾರತ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳಲು ಶುರು ಮಾಡಿ ಹಲವು ತಿಂಗಳುಗಳೇ ಆಗಿವೆ. ಅದರಲ್ಲೂ ಭಾರತದ ಈಗಿನ ಬಹುಪಾಲು ತೈಲ ಆಮದು ರಶ್ಯಾದಿಂದಲೇ ಬರುತ್ತಿದೆ. ಅರಬ್ ರಾಷ್ಟ್ರಗಳ ಅವಲಂಬಿಕೆ ಬಹುತೇಕ ಕಡಿಮೆಯಾಗಿದೆ. ಹಾಗಿರುವಾಗ ಈ ಅರಬ್ ರಾಷ್ಟ್ರಗಳ ಮುಂದೆ ಎದ್ದು ನಿಂತು ವಿಷಯ ಅರುಹೋದು ಬಿಟ್ಟು ತಲೆ ತಗ್ಗಿಸುವ ಅಗತ್ಯವೇ ಇರಲಿಲ್ಲ. ಭಾರತಕ್ಕೆ ಬಾಯ್ಕಾಟ್ ಬೆದರಿಕೆ ಹಾಕಿದ ಅರಬ್ ರಾಷ್ಟ್ರಗಳ ಬಹುತೇಕ ಆಮದು ಭಾರತದಿಂದಲೇ ಆಗುತ್ತಿದೆ ಅನ್ನುವುದನ್ನೇ ಮರೆತು ಬಿಟ್ಟಂತಿದೆ. ಒಟ್ಟಿನಲ್ಲಿ ಭಾರತ ತಲೆ ತಗ್ಗಿಸಿದ್ದು ಅಂತರರಾಷ್ಟ್ರೀಯವಾಗಿ ಒಂದು ಅಪಹಾಸ್ಯದ ಘಟನೆಯಾಗಿ, ದೇಶದ ಒಳಗೆ ಬಿಜೆಪಿ ಕಾರ್ಯಕರ್ತರಲ್ಲಿ ಹಾಗು ಹಿಂದೂ ಧರ್ಮೀಯರಲ್ಲಿ ಬಿಜೆಪಿ ಪಕ್ಷದ ಬಗ್ಗೆ ಅಸಮಾಧಾನದ ವಿಷಯವಾಗಿ ನೆಲೆಯಾಗಿದೆ.