Political

ನಮ್ಮಿಂದ ಭಾರತಕ್ಕೆ ತೊಂದರೆಯಾಗುವುದಿಲ್ಲ: ತಾಲೀಬಾನ್

ಕಾಬೂಲ್: ಉಗ್ರ ಸಂಘಟನೆ ತಾಲೀಬಾನ್ ಅಫ್ಘಾನಿಸ್ತಾನದಲ್ಲಿ ಇಸ್ಲಾಂ ಹೆಸರಿನಲ್ಲಿ ಮುಗ್ಧ ಜನರನ್ನು ಕೊಲ್ಲುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ವಿಶ್ವದ ಕಣ್ಣಿಗೆ ತಾನು ಶಾಂತಿಪ್ರಿಯ ಎಂದು ಮಣ್ಣೆರಚುವ ಪ್ರಯತ್ನದಲ್ಲಿದ್ದಂತೆ ತೋರುತ್ತದೆ. ಜತೆಗೆ ತಮ್ಮಿಂದ ಭಾರತಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೂಡ ಹೇಳಿದೆ.

ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾಲೀಬಾನ್ ವಕ್ತಾರ ಜಬೀವುಲ್ಲಾ ಮುಜಾಹೀದ್, ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಧಾಳಿಯನ್ನು ಖಂಡಿಸಿದ್ದು, ‘ಯಾವುದೇ ಗುಂಪು ಅಥವಾ ಸಂಘಟನೆ ಅಫ್ಘಾನಿಸ್ತಾನದ ಮುಗ್ಧ ಜನಗಳ ಮೇಲೆ ಧಾಳಿ ಮಾಡಲು ಅವಕಾಶ ಇಲ್ಲ. ಅಫ್ಘಾಅನ್ ಜನರು ಒಂದು ರಾಷ್ಟ್ರವಾಗಿ ಶಾಂತಿಯುತ ಜೀವನ ನಡೆಸುವ ಹಕ್ಕು ಹೊಂದಿದ್ದಾರೆ. ಅದಕ್ಕಾಗಿ ನಾವು ಶ್ರಮಿಸುತ್ತೇವೆ’ ಎಂದು ಹೇಳಿದ್ದಾನೆ.

ಕಾಬೂಲ್ ವೈಫಲ್ಯ ನಮ್ಮ ಭದ್ರತಾ ದೋಷವಲ್ಲ. ದೇಶದ ಭದ್ರತೆಯ ವಿಷಯದಲ್ಲಿ ನಾವು ಜಾಗರೂಕರಾಗಿದ್ದೇವೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ತೀವ್ರ ಜನಸಂದಣಿಯಿತ್ತು ಹಾಗು ಆ ಪ್ರದೇಶದ ರಕ್ಷಣೆಯನ್ನು ಅಮೇರಿಕಾದ ಪಡೆಗಳು ನೋಡುತ್ತಿದ್ದವು ಎಂದು ಕಾಬೂಲ್ ಧಾಳಿಗೆ ಹಾಗು ಅಲ್ಲಿನ ಭದ್ರತಾ ವೈಫಲ್ಯಕ್ಕೆ ಅಮೇರಿಕಾದತ್ತ ಬೆರಳು ತೋರಿಸುವ ಯತ್ನ ನಡೆಸಿದ್ದಾನೆ ತಾಲಿಬಾನ್ ವಕ್ತಾರ.

ಅಫ್ಘಾನಿಸ್ತಾನದಲ್ಲಿ ಎಲ್ಲ ದೇಶಗಳ ರಾಯಭಾರಿಗಳ ಉಪಸ್ಥಿತಿಯನ್ನು ಎದುರು ನೋಡುತ್ತಿದ್ದೇವೆ ಎನ್ನುವ ಮೂಲಕ ಇತರೆ ದೇಶಗಳು ಅಫ್ಘಾನಿಸ್ತಾನದಲ್ಲಿ ತಮ್ಮ ರಾಯಭಾರ ಕಚೇರಿಗಳನ್ನು ಮರಳಿ ಸ್ಥಾಪಿಸುವಂತೆ ಆಗ್ರಹಿಸಿದ್ದಾನೆ.

ಭಾರತದ ಕುರಿತಂತೆ ಕೇಳಿದ ಪ್ರಶ್ನೆಗೆ ತಾಲಿಬಾನ್ ಸರಕಾರ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ನಮ್ಮಿಂದಾಗಿ ಭಾರತಕ್ಕೆ ತೊಂದರೆಯಾಗಲು ತಾಲಿಬಾನ್ ಬಿಡುವುದಿಲ್ಲ. ನಮ್ಮಿಂದ ಯಾವುದೇ ಅಪಾಯವು ಇಲ್ಲ ಎಂದು ಭಾರತದ ಕುರಿತು ಜಬೀವುಲ್ಲಾ ಪ್ರತಿಕ್ರಿಯಿಸಿದ್ದಾನೆ.

ಆದರೆ ಇದೇ ಜಬೀವುಲ್ಲಾ ಮುಜಾಹೀದ್, ಆಗಸ್ಟ್ 26ರಂದು ಪಾಕ್ ಮೂಲದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನ ನಮ್ಮ ಎರಡನೆಯೇ ಮನೆ ಎಂದು ಹೇಳಿಕೆ ನೀಡಿರುವುದನ್ನು ಅಲ್ಲಗಳೆಯಲಾಗದು. ಎರಡೂ ದೇಶಗಳ ಧರ್ಮಗಳು ಒಂದೇ ಆಗಿರುವ ಕಾರಣ ಸಾಂಪ್ರದಾಯಿಕವಾಗಿ ನಾವು ಹೆಚ್ಚು ಹೊಂದಿಕೊಂಡಿದ್ದೇವೆ. ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಹೆಚ್ಚು ಗಟ್ಟಿಗೊಳಿಸಲು ನಾವು ಎದುರುನೋಡುತ್ತಿದ್ದೇವೆ ಎಂದು ಮುಜಾಹೀದ್ ಹೇಳಿಕೆ ನೀಡಿದ್ದ.

Exit mobile version