
ದುಬೈ: ಇಲ್ಲಿ ನಡೆದ ಮುಂಬೈ ಹಾಗು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಐಪಿಎಲ್ ಟಿ-20 ಮುಖಾಮುಖಿಯಲ್ಲಿ ಧೋನಿ ಸಾರಥ್ಯದ ಚೆನ್ನೈ ತಂಡ 20 ರನ್ನುಗಳ ಜಯಭೇರಿ ಬಾರಿಸಿದೆ. ಈ ಜಯದೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಧೋನಿ ತಂಡ ಮೊದಲ ಓವರಿನಿಂದಲೇ ವಿಕೆಟ್ ಒಪ್ಪಿಸುತ್ತಾ ಸಾಗಿತು. 24 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಅತೀ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವ ಭೀತಿ ಹುಟ್ಟಿಸಿತ್ತು. ಇದರ ಮಧ್ಯೆ ಅಂಬಟಿ ರಾಯುಡು ಗಾಯಾಳಾಗಿ ಹೊರ ನಡೆದಿದ್ದರಿಂದ ಮತ್ತೆ ಅವರು ಬ್ಯಾಟಿಂಗ್ ಮಾಡುವ ವಿಶ್ವಾಸ ಇರಲಿಲ್ಲ. 5 ಪ್ರಮುಖ ಬ್ಯಾಟ್ಸ್’ಮ್ಯಾನ್’ಗಳು ಪೆವಿಲಿಯನ್ ಸೇರಿದ ಈ ಸಂದರ್ಭ ಏಕಾಂಗಿಯಾಗಿ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ರುತುರಾಜ್ ಗಾಯಕ್ವಾಡ್ ತಂಡವನ್ನು ಗೌರವಯುತ ಮೊತ್ತ ಪೇರಿಸುವತ್ತ ಮುನ್ನಡೆಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ 26 ರನ್ ಬಾರಿಸಿದರು. 5ನೇ ವಿಕೆಟಿಗೆ ಇವರಿಬ್ಬರ ಮಧ್ಯೆ 81 ರನ್ನುಗಳ ಉಪಯೋಗಿ ಜತೆಯಾಟ ಮೂಡಿ ಬಂತು. ಜಡೇಜಾ ಔಟಾದ ಬಳಿಕ ಗಾಯಕ್ವಾಡ್ ಜತೆಯಾದ ಬ್ರಾವೊ ಕೇವಲ 8 ಎಸೆತಗಳಲ್ಲಿ ಮೂರು ಸಿಕ್ಸರ್ ಸೇರಿ 23 ರನ್ ಚಚ್ಚಿ ತಂಡದ ಮೊತ್ತ ಮತ್ತಷ್ಟು ಹಿಗ್ಗುವಂತೆ ಮಾಡಿದರು. ಜಸ್ಪ್ರೀತ್ ಬುಮ್ರಾ ಎಸೆದ ಇನ್ನಿಂಗ್ಸ್ ನ ಕೊನೆಯ ಓವರಿನ ಕೊನೆಯ ಎಸೆತವನ್ನು ಸಿಕ್ಸರ್’ಗೆ ಅಟ್ಟುವ ಮೂಲಕ ರುತುರಾಜ್ ಗಾಯಕ್ವಾಡ್ ತಮ್ಮ ಸರ್ವಾಧಿಕ 88 ರನ್ ಗಳಿಸಿದರು.
157 ರನ್ನುಗಳ ಗೆಲುವಿನ ಗುರಿ ಪಡೆದ ಮುಂಬೈ ರೋಹಿತ್ ಶ್ರಮ ಹಾಗು ಹಾರ್ದಿಕ್ ಪಾಂಡ್ಯ ಗೈರಿನಿಂದ ಹೊರ ಬಂದಂತೆ ಕಾಣಲಿಲ್ಲ. ವಿಕೆಟ್ ಒಪ್ಪಿಸುತ್ತಾ ಸಾಗಿದ ತಂಡ ಕೊನೆಗೆ 20 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಶಕ್ತವಾಯಿತು. ಸೌರಭ್ ತಿವಾರಿ (50 ರನ್) ಏಕಾಂಗಿ ಹೋರಾಟ ಫಲ ನೀಡಲಿಲ್ಲ. ನಿರೀಕ್ಷೆಯಂತೆ ರುತುರಾಜ್ ಗಾಯಕ್ವಾಡ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.












































