Sports

ಐಪಿಎಲ್: ಕೆಕೆಆರ್ ಧಾಳಿಗೆ ತರಗೆಲೆಯಂತೆ ಉರುಳಿದ ಆರ್ಸಿಬಿಗೆ ಹೀನಾಯ ಸೋಲು

ಅಬುದಾಭಿ: ಅಬುದಾಭಿಯಲ್ಲಿ ನಡೆದ ಐಪಿಎಲ್ 2021ರ 31ನೇ ಪಂದ್ಯದಲ್ಲಿ ಬಲಿಷ್ಠ ಆರ್ಸಿಬಿ ಕೆಕೆಆರ್ ಬೌಲಿಂಗ್ ಧಾಳಿಗೆ ತರಗೆಲೆಯಂತೆ ಉದುರಿದ್ದು 19 ಓವರುಗಳಲ್ಲಿ ಕೇವಲ 92 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತರವಾಗಿ ಕೆಕೆಆರ್ 10 ಓವರುಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿ ವಿಜಯಿಯಾಯಿತು.

ಟಾಸ್ ಗೆದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ನಡೆಸುವ ನಿರ್ಧಾರ ಕೈಗೊಂಡರು. ದೇವದತ್ ಪಡಿಕ್ಕಲ್ ಜತೆ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ಕೇವಲ 5 ರನ್ನಿಗೆ ಪೆವಿಲಿಯನ್ ಸೇರಿದರು. ನಂತರ ಸೇರಿಕೊಂಡ ಪಡಿಕ್ಕಲ್ ಹಾಗು ಶ್ರೀಕರ್ ಭರತ್ ಜೋಡಿ ಬಿರುಸಿನ ಬ್ಯಾಟಿಂಗ್ ಮಾಡುತ್ತ ಆಕ್ರಮಣಕಾರಿ ಜೋಡಿಯಾಗುವ ಮುನ್ಸೂಚನೆ ನೀಡಿತು. ಆದರೆ ದೇವದತ್ ಪಡಿಕ್ಕಲ್ 22 ರನ್ ಆಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದರೆ, ಶ್ರೀಕರ್ 16 ರನ್ನಿಗೆ ಶುಭ್ಮನ್ ಗಿಲ್’ಗೆ ಕ್ಯಾಚಿತ್ತು ಸಾಗಿದರು. ನಂತರ ಬಂದವರಾರು ಕ್ರೀಸಿನಲ್ಲಿ ನಿಲ್ಲಲು ಸಾಧ್ಯವಿಲ್ಲವೇನೋ ಎಂಬಂತೆ ವಿಕೆಟ್ ಒಪ್ಪಿಸುತ್ತಾ ಸಾಗಿದರು. ಹೊಡೆಬಡಿಯ ಆಟಗಾರರಾದ ಮ್ಯಾಕ್ಸ್ವೆಲ್ 10 ರನ್ ಹಾಗು ಅಭ್ಯಾಸ ಪಂದ್ಯದಲ್ಲಿ ಶತಕ ದಾಖಲಿಸಿ ಮಿಂಚಿದ್ದ ಡಿವಿಲಿಯರ್ಸ್ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು. ಅತ್ತ್ಯುತ್ತಮ ಎಕಾನಮಿ ರೇಟಿಂಗ್ ಮೂಲಕ ಮಾರಕ ಧಾಳಿ ಸಂಘಟಿಸಿದ ವರುಣ್ ಚಕ್ರವರ್ತಿ ಹಾಗು ರಸ್ಸೆಲ್ ತಲಾ 3 ವಿಕೆಟ್ ಕಿತ್ತರು.

ಗೆಲುವಿಗೆ 93 ರನ್ನುಗಳ ಸುಲಭ ಗುರಿ ಪಡೆದ ಕೋಲ್ಕತ್ತಾ ಆರಂಭಿಕರಾದ ಶುಭ್ಮನ್ ಗಿಲ್ 48 ಹಾಗು ವೆಂಕಟೇಶ್ ಅಯ್ಯರ್ 41 ಅವರ ಬ್ಯಾಟಿಂಗ್ ನೆರವಿನಿಂದ 10 ಓವರುಗಳಲ್ಲಿ ಗುರಿ ತಲುಪಿ ವಿಜಯಪತಾಕೆ ಹಾರಿಸಿತು.

Exit mobile version