HomeTravelಬದಲಾವಣೆಯತ್ತ ಭಾರತೀಯ ಯುವ ಜನತೆ: ಗೋವಾ-ಮನಾಲಿ ಅಲ್ಲ, ಈಗ ಅಯೋಧ್ಯೆ-ವಾರಣಾಸಿ ಸಂದರ್ಶಕರ ಹಾಟ್‌ಸ್ಪಾಟ್

ಬದಲಾವಣೆಯತ್ತ ಭಾರತೀಯ ಯುವ ಜನತೆ: ಗೋವಾ-ಮನಾಲಿ ಅಲ್ಲ, ಈಗ ಅಯೋಧ್ಯೆ-ವಾರಣಾಸಿ ಸಂದರ್ಶಕರ ಹಾಟ್‌ಸ್ಪಾಟ್

ಅಯೋಧ್ಯೆ: ಭಾರತ ಸಾಂಸ್ಕೃತಿಕ ಪುನರುಜ್ಜೀವನದತ್ತ ಸಾಗುತ್ತಿದ್ದು ಇಲ್ಲಿನ ಯುವ ಜನತೆ ವಿಶೇಷ ಸಂದರ್ಭಗಳಲ್ಲಿ ಗೋವ, ಮನಾಲಿ, ಮಸ್ಸೂರಿ, ಊಟಿಗಳಿಗೆ ಹೋಗುತ್ತಿದ್ದವರು ಈಗ ಹಿಂದೂ ಧಾರ್ಮಿಕ ಕೇಂದ್ರಗಳು, ದೇವಸ್ಥಾನಗಳಲ್ಲಿ ದರ್ಶನ, ಅಧ್ಯಾತ್ಮದ ಅನುಭವಕ್ಕೆ ಆದ್ಯತೆ ನೀಡುತ್ತಿದ್ದಾರೆ.

ಇದೇ ತಿಂಗಳು ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದ್ದು ಹಿಂದೂಗಳ 500 ವರ್ಷಗಳ ಹೋರಾಟ ಫಲ ನೀಡಲಿದೆ. ಈ ವಿಶೇಷ ಸಂದರ್ಭ ದೇಶಾದ್ಯಂತ ಲಕ್ಷಾಂತರ ಜನರು ಅಯೋಧ್ಯೆಗೆ ತಲುಪಲು ಕಾತುರರಾಗಿದ್ದಾರೆ. ಅಯೋಧ್ಯೆ ಜತೆ ಜತೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ವಾರಣಾಸಿ, ಉಜ್ಜಯಿನಿ ಮತ್ತು ಮಥುರಾ ಮುಂತಾದ ಧಾರ್ಮಿಕ ಸ್ಥಳಗಳನ್ನು ನೋಡಲು ತೆರಳುತ್ತಿದ್ದಾರೆ. ಪ್ರಸ್ತುತ ಸರ್ಕಾರವು ಭಕ್ತರಿಗಾಗಿ ಅಲ್ಲಿನ ಮೂಲ ಸೌಕರ್ಯ ಹಾಗು ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದು ಹಾಗು ಭಾರತದಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಜಾಗೃತಿ ಈ ಬದಲಾವಣೆಗೆ ಕಾರಣವಾಗಿದೆ.

ಭಾರತದ ಧಾರ್ಮಿಕ ಸ್ಥಳಗಳು ಈಗ ಜನರ ಅತ್ಯಂತ ನೆಚ್ಚಿನ ತಾಣವಾಗಿದೆ ಎಂದು ಓಯೋ ಹೋಟೆಲ್ ಸರಪಳಿಯ ಸಂಸ್ಥಾಪಕ ರಿತೇಶ್ ಅಗರ್ವಾಲ್ ಹೇಳಿದ್ದಾರೆ. ತಮ್ಮ ಆ್ಯಪ್ ಬಳಕೆದಾರರ ಅಂಕಿಅಂಶಗಳಿಗೆ ಸಂಬಂಧಿಸಿದಂತೆ, ಗೋವಾ ಮತ್ತು ನೈನಿತಾಲ್‌ಗೆ ಹೋಲಿಸಿದರೆ, ಅಯೋಧ್ಯೆಯಲ್ಲಿ ತಂಗಿರುವ ಜನರಲ್ಲಿ ಗರಿಷ್ಠ ಹೆಚ್ಚಳ ಕಂಡುಬಂದಿದೆ ಎಂದು ಹೇಳಿದರು. ಅಯೋಧ್ಯೆಯ ವಿಷಯದಲ್ಲಿ ಈ ಅಂಕಿ ಅಂಶವು 70% ಆಗಿದ್ದರೆ, ಗೋವಾದಲ್ಲಿ 50% ಮತ್ತು ನೈನಿತಾಲ್‌ನಲ್ಲಿ 60% ರಷ್ಟು ಜಿಗಿತ ಕಂಡುಬಂದಿದೆ. ಮುಂದಿನ 5 ವರ್ಷಗಳವರೆಗೆ ಆಧ್ಯಾತ್ಮಿಕ ಪ್ರವಾಸೋದ್ಯಮವು ಭಾರತದ ಪ್ರವಾಸೋದ್ಯಮವನ್ನು ಮುನ್ನಡೆಸಲಿದೆ ಎಂದು ರಿತೇಶ್ ಅಗರ್ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶೇಷ ಸಂದರ್ಭಗಳಲ್ಲಿ ಜನರು ತಮ್ಮ ಕುಟುಂಬದೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಬಯಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಅವಿವಾಹಿತ ದಂಪತಿಗಳು ಅಥವಾ ಹಿರಿಯರು ಎಲ್ಲರೂ ಈಗ ವಿನೋದಕ್ಕಿಂತ ಆಧ್ಯಾತ್ಮಿಕತೆಗೆ ಆದ್ಯತೆ ನೀಡುತ್ತಿದ್ದಾರೆ. ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವುದಲ್ಲದೆ, ಜನರು ದೇವರ ದರ್ಶನಕ್ಕಾಗಿ ಧಾರ್ಮಿಕ ಸ್ಥಳಗಳಿಗೂ ಹೋಗುತ್ತಿದ್ದಾರೆ.

2024 ರ ಮೊದಲ ದಿನ, ಕಾಶಿ ವಿಶ್ವನಾಥನ ದರ್ಶನಕ್ಕಾಗಿ 8 ಲಕ್ಷ ಸಂದರ್ಶಕರು ವಾರಣಾಸಿಯನ್ನು ತಲುಪಿದ್ದಾರೆ ಎಂದು ವರದಿ ತಿಳಿಸಿದೆ. ಇಲ್ಲಿ ಕೂಡ ದೇಗುಲಕ್ಕೆ ಸೇರಿದ ಒಂದು ಭಾಗವನ್ನು ಮೊಘಲ್ ದೊರೆ ಔರಂಗಜೇಬ ಧಾಳಿ ಮಾಡಿ ವಶಪಡಿಸಿಕೊಂಡು ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಿದನು. ಈ ವಿಷಯ ನ್ಯಾಯಾಲಯದಲ್ಲಿ ಬಾಕಿ ಇದ್ದು, ಕಾನೂನು ಹೋರಾಟ ನಡೆಯುತ್ತಿದೆ. ಇದೀಗ ನರೇಂದ್ರ ಮೋದಿ ಸರಕಾರ ಇಲ್ಲಿನ ಅಭಿವೃದ್ಧಿಗೆ ಆದ್ಯತೆ ನೀಡಿ ಆ ಬಳಿಕ ಕಾಶಿಯ ಚಿತ್ರಣವೇ ಬದಲಾಗಿದ್ದು ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸತೊಡಗಿದ್ದಾರೆ.

ಕೃಷ್ಣನ ಮಥುರಾದಲ್ಲೂ ಕಳೆದ 3 ದಿನಗಳಲ್ಲಿ 18 ಲಕ್ಷ ಮಂದಿ ಭಕ್ತರು ಸಂದರ್ಶಿಸಿದ್ದಾರೆ. ಈ ಮೂಲಕ ಭಾರತೀಯ ಜನತೆ ಅದರಲ್ಲೂ ಯುವ ಸಮೂಹ ಆಧ್ಯಾತ್ಮ, ಧಾರ್ಮಿಕ ಪ್ರವಾಸಗಳತ್ತ ಆಸಕ್ತಿ ತೋರಿಸುತ್ತಿದೆ.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
 https://chat.whatsapp.com/CMUDdTXoFVn7atm3zHYGrd

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments