Coastal

ಸುರತ್ಕಲ್ ವ್ಯಾಪಾರಿ ಜಲೀಲ್ ಹತ್ಯೆ: ಪೊಲೀಸ್ ತನಿಖೆ ಚುರುಕು, ಎರಡು ದಿನ ಮದ್ಯ ನಿಷೇಧ

ಮಂಗಳೂರು: ಸುರತ್ಕಲ್ಲಿನಲ್ಲಿ ಶನಿವಾರ ಸಂಜೆ ನಡೆದ ವ್ಯಾಪಾರಿಯೋರ್ವರ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು ಹಣಕಾಸು ವ್ಯವಹಾರ, ಹಫ್ತಾ ವಸೂಲಿಗಾರರ ಉಪಟಳ ಇತ್ಯಾದಿ ಸುದ್ದಿಗಳು ಹರಿದಾಡುತ್ತಿದ್ದು ಎಲ್ಲ ದಿಕ್ಕಿನಲ್ಲಿ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ 24 ರಂದು ಸಂಜೆ ಅಂಗಡಿ ಮಾಲಿಕ ಜಲೀಲ್ ಅವರನ್ನು ಇಬ್ಬರು ಮುಸುಕುಧಾರಿಗಳು ಚೂರಿಯಿಂದ ಚುಚ್ಚಿ ಹತ್ಯೆಗೈದಿದ್ದರು.

ಕೊಲೆ ಆರೋಪಿಗಳ ಬಂಧನಕ್ಕೆ ನಾಲ್ಕು ತಂಡಗಳ ರಚನೆ ಮಾಡಲಾಗಿದೆ. ಹತ್ಯೆಯಾದ ಜಲೀಲ್ ಮೃತ ದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಜಲೀಲ್ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಇಂದು ಮಧ್ಯಾಹ್ನ ಕೃಷ್ಣಾಪುರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಶನಿವಾರ ಸಂಜೆ ಇಬ್ಬರು ಮುಸುಕುದಾರಿಗಳು ಜಲೀಲ್ ಅಂಗಡಿಯ ಹಿಂಬದಿಯಿಂದ ಬಂದು ಜಲೀಲ್ ಅವರನ್ನು ಚೂರಿಯಿಂದ ಇರಿದು ಕತ್ತಲಲ್ಲಿ ಪರಾರಿಯಾಗಿದ್ದರು. ಜಲೀಲ್ ಅವರ ಅಂಗಡಿಯಲ್ಲಿ ಹಾಕಿದ್ದ ಸಿಸಿಟಿವಿ ಕ್ಯಾಮೆರಾ ಸಿಸ್ಟಮ್ ಕೆಟ್ಟು ಹೋಗಿದ್ದರಿಂದ ಆರೋಪಿಗಳ ಪತ್ತೆ ಕಷ್ಟವಾಗಿದೆ.

ಮುಂಜರೂಕತಾ ಕ್ರಮವಾಗಿ ಸುರತ್ಕಲ್, ಪಣಂಬೂರು, ಬಜ್ಪೆ, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಜತೆಗೆ 27ರ ಬೆಳಿಗ್ಗೆ 10 ಗಂಟೆವರೆಗೆ ಈ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version