Coastal

ದಕ್ಷಿಣ ಕನ್ನಡದಲ್ಲಿ ತಾಲೀಬಾನಿ ಸಂಸ್ಕೃತಿ ನಡೆಯಲು ಬಿಡುವುದಿಲ್ಲ : ಸಚಿವ ಕೋಟ ಗರಂ

ಮಂಗಳೂರು : ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕದಲ್ಲಿ ವೀರ್ ಸಾವರ್ಕರ್ ಫೋಟೋಗೆ ಸಂಬಂಧಿಸಿದಂತೆ ರಥಯಾತ್ರೆಗೆ ಅಡ್ಡಿಪಡಿಸಿ ದಾಂಧಲೆ ಎಬ್ಬಿಸಿದ ಎಸ್.ಡಿ.ಪಿ.ಐ ಕೃತ್ಯದ ಬಗ್ಗೆ ಗರಂ ಆಗಿರುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಲೀಬಾನ್ ಸಂಸ್ಕೃತಿ ನಡೆಯಲು ಬಿಡುವುದಿಲ್ಲ. ಸ್ವಾತಂತ್ರ ಆಚರಣೆಗೆ ಅಡ್ಡಿಪಡಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯುತವಾದ ಜಿಲ್ಲೆಯಾಗಿದ್ದು, ದೇಶವೆಲ್ಲಾ 75ನೇ ಸ್ವಾತಂತ್ರ ಸಂಭ್ರಮಾಚರಣೆಯಲ್ಲಿರುವಾಗ ಕೆಲವು ಕಿಡಿಗೇಡಿಗಳು ಸ್ವಾತಂತ್ರದ ರಥಯಾತ್ರೆಯನ್ನು ಅಡ್ಡಹಾಕಿ ದಾಂಧಲೆ ಮಾಡಿರುವುದನ್ನು ಸಹಿಸಲಾಗದು. ಜಿಲ್ಲೆಯಲ್ಲಿ ತಾಲೀಬಾನಿ ಸಂಸ್ಕೃತಿಯನ್ನು ನಡೆಸಲು ಅವಕಾಶ ನೀಡುವುದಿಲ್ಲ. ಈಗಾಗಲೇ ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಹಾಗು ಗೃಹ ಸಚಿವರಿಗೆ ತಿಳಿಸಲಾಗಿದ್ದು ಸಂಬಂಧಪಟ್ಟವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ ಮಾಡಲಾಗಿದೆ’ ಎಂದು ಹೇಳಿದರು.

ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಕಬಕ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಿದ್ದ ರಥಯಾತ್ರೆಯಲ್ಲಿ ಸ್ವಾತಂತ್ರ ಹೋರಾಟಗಾರರಾದ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ವೀರ ಸಾವರ್ಕರ್ ಸಹಿತ ಹಲವು ಮಹನೀಯರ ಭಾವಚಿತ್ರಗಳನ್ನು ಹಾಕಲಾಗಿತ್ತು. ರಥಯಾತ್ರೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹೊತ್ತಿನಲ್ಲಿ ಏಕಾಏಕಿ ಗುಂಪು ಕಟ್ಟಿಕೊಂಡು ಬಂದ ಎಸ್.ಡಿ.ಪಿ.ಐ ಗೆ ಸೇರಿದ ಕಿಡಿಗೇಡಿಗಳು ರಥಯಾತ್ರೆಯನ್ನು ತಡೆದು ವೀರ ಸಾವರ್ಕರ್ ಭಾವಚಿತ್ರವನ್ನು ತೆಗೆಯುವಂತೆ ಗಲಭೆ ನಡೆಸಿ ರಥಯಾತ್ರೆಯ ವಾಹನವನ್ನು ಹಾನಿ ಮಾಡಲು ಮುಂದಾದರು. ಆದರೆ ಊರವರ ಪ್ರತಿರೋಧದಿಂದಾಗಿ ಹಾನಿಗೈಯಲು ಸಾಧ್ಯವಾಗಲಿಲ್ಲ. ಈ ಸಂದರ್ಭ ಕಿಡಿಗೇಡಿಗಳು ಗ್ರಾಮ ಪಂಚಾಯತಿಗೆ ಧಿಕ್ಕಾರ ಕೂಗುತ್ತ ಕೆಲ ಹೊತ್ತು ಗದ್ದಲ ಸೃಷ್ಟಿಸಿದರು.

ದೇಶ 75ರ ಸ್ವಾತಂತ್ರ ಸಂಭ್ರಮದಲ್ಲಿರುವಾಗ ಇಂತಹ ಕೆಲವು ಕಲ್ಮಶ ಮನಸ್ಸುಗಳು ಸಂಭ್ರಮಕ್ಕೆ ಕಲ್ಲು ಹಾಕಲು ಯತ್ನಿಸಿರುವುದು ಖೇದಕರ.

Exit mobile version