
ಶಿವಮೊಗ್ಗ: ಶಿವಮೊಗ್ಗದ ಸೀಗೆಹಟ್ಟಿ, ಭರ್ಮಪ್ಪ ನಗರದಲ್ಲಿ ಕಲ್ಲು ತೂರಾಟ ಗಲಭೆ ಪ್ರಕರಣ ಹಾಗು ಪ್ರಕಾಶ್ ಎಂಬಾತನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಘಟನೆ ಸಂಬಂಧ ಮೂವರು ಮತಾಂಧರನ್ನು ಬುಧವಾರ ಬಂಧಿಸಿದ್ದಾರೆ.
ಮಾರ್ಕೆಟ್ ಫೌಜಾನ್, ಅಜರ್ ಅಲಿಯಾಸ್ ಅಜ್ಜು, ಫರಾಜ್ ಬಂಧಿತ ಆರೋಪಿಗಳು. ಈ ಮತಾಂಧರು ಸೋಮವಾರ ರಾತ್ರಿ ಭರ್ಮಪ್ಪ ನಗರದಲ್ಲಿ ಪ್ರಕಾಶ್ ಎಂಬ ಯುವಕನ ತಲೆಗೆ ಕಲ್ಲು ಹೊಡೆದು, ಅವಾಚ್ಯ ಶಬ್ದಗಳನ್ನು ಕೂಗುತ್ತ ಬೈಕಿನಲ್ಲಿ ಪರಾರಿಯಾಗಿದ್ದರು.
ಘಟನೆ ಬಳಿಕ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾದ ಇಬ್ಬರು ತಲೆ ಮರೆಸಿಕೊಂಡಿದ್ದು ಅವರ ಪತ್ತೆ ಶೋಧ ಕಾರ್ಯ ಆರಂಭವಾಗಿದೆ. ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಗಾಂಧಿ ಬಜಾರ್, ಬಿಎಚ್ ರಸ್ತೆ, ಸೀಗೆ ಹಟ್ಟಿ ಹಾಗೂ ಹಳೆ ಶಿವಮೊಗ್ಗ ಪ್ರದೇಶಗಳಲ್ಲಿ ರೂಟ್ ಮಾರ್ಚ್ ನಡೆಸಲಾಗಿದೆ.
ಸಾವರಕರ್ ಕಾರ್ಯಕ್ರಮ ಮುಗಿಸಿ ವಾಪಸಾಗುತ್ತಿದ್ದ ಪ್ರಕಾಶ್ ಎಂಬವರ ಮೇಲೆ ಧಾಳಿ ಮಾಡಿ ಹಲ್ಲೆ ಮಾಡಲಾಗಿತ್ತು. ಈ ಬಗ್ಗೆ ಪ್ರಕಾಶ್ ಅವರು ಹೇಳಿಕೆ ನೀಡಿ, ಮೂವರು ಮುಸ್ಲಿಂ ಹುಡುಗರು ಬಂದು ಇದ್ದಕ್ಕಿದ್ದಂತೆ ನನ್ನ ಮೇಲೆ ಕಲ್ಲುಗಳು ಮತ್ತು ಇತರ ವಸ್ತುಗಳಿಂದ ಹಲ್ಲೆ ನಡೆಸಲು ಆರಂಭಿಸಿದರು. ಅದೃಷ್ಟವಶಾತ್ ಹೇಗೋ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಹಲ್ಲೆ ನಡೆಸಲು ಆರಂಭಿಸಿದ ಮೂವರು ನನ್ನನ್ನು ಆರ್’ಎಸ್ಎಸ್ ಗೂಂಡಾ ಹಾಗೂ ಇತರೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ನಾನು ಯಾವುದೇ ಸಂಘಟನೆಗೆ ಸೇರಿದವನಲ್ಲ ಅಥವಾ ಅವರೊಂದಿಗೆ ಯಾವುದೇ ನಂಟನ್ನೂ ಹೊಂದಿಲ್ಲ. ಮೂವರ ಜೊತೆಗೆ ನಾನು ಯಾವುದೇ ಶತ್ರುತ್ವವಾಗಲೀ, ನಂಟನ್ನಾಗಿಲೀ ಹೊಂದಿಲ್ಲ. ಇದ್ದಕ್ಕಿದ್ದಂತೆ ಬಂದು ದಾಳಿ ನಡೆಸಿದ್ದರು ಎಂದು ಹೇಳಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL