
ಕೋಟಾ/ರಾಜಸ್ಥಾನ: ಭಾನುವಾರದಂದು ಕಾರು ಒಂದು ರಾಜಸ್ಥಾನದ ಚಂಬಲ್ ನದಿಗೆ ಬಿದ್ದ ಪರಿಣಾಮ ಮದುವೆ ಗಂಡು ಸೇರಿದಂತೆ ಮದುವೆಯ ಮೆರವಣಿಗೆಯ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಎಏನ್ಐ ವರದಿ ಮಾಡಿದೆ. ಮದುವೆಯ ಮೆರವಣಿಗೆಯು ಚೌತ್ ಕಾ ಬರ್ವಾಡದಿಂದ ಉಜ್ಜಯಿನಿಗೆ ಹೋಗುತ್ತಿತ್ತು ಎಂದು ಸಂಸ್ಥೆ ತಿಳಿಸಿದೆ.
ರಕ್ಷಣಾ ಕಾರ್ಯಾಚರಣೆ ಮಾಡುತ್ತಿರುವ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತ ಕ್ರೇನ್ ಸಹಾಯದಿಂದ ಕಾರನ್ನು ಚಂಬಲ್ ನದಿಯಿಂದ ಮೇಲೆತ್ತಿದ್ದಾರೆ. ಕೋಟಾ ಪೊಲೀಸರು ಒಂಬತ್ತು ಶವಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ಬಗ್ಗೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. “ಮದುವೆ ಗಂಡು ಸೇರಿ 9 ಜನರು ಸಂಚರಿಸುತ್ತಿದ್ದ ಕಾರು ಚಂಬಲ್ ನದಿಗೆ ಬಿದ್ದು ಮೃತಪಟ್ಟಿರುವುದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ. ದುಃಖತಪ್ತ ಕುಟುಂಬಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಮತ್ತು ಅಗಲಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ”. ಎಂದು ಅಶೋಕ್ ಗೆಹಲೋಟ್ ಟ್ವೀಟ್ ಮಾಡಿದ್ದಾರೆ.