
ಈಡನ್ ಗಾರ್ಡನ್: ಪ್ರವಾಸಿ ವೆಸ್ಟ್ ವಿಂಡೀಸ್ ಎದುರಿನ ಮೊದಲ ಟಿ-20 ಪಂದ್ಯದಲ್ಲಿ ಅತಿಥೇಯ ಭಾರತ ತಂಡ 6 ವಿಕೆಟ್ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಡಿದ ವೆಸ್ಟ್ ವಿಂಡೀಸ್ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಭಾರತದ ಪರ ರವಿ ಬಿಶ್ನೋಯಿ, ಹರ್ಷಲ್ ಪಟೇಲ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಪೂರನ್ 61 ಹಾಗು ಮೇಯರ್ 31 ರನ್ ಗಳಿಸಿ ಸ್ಫರ್ಧಾತ್ಮಕ ಮೊತ್ತ ಪೇರಿಸುವಲ್ಲಿ ನೆರವಾದರು.
158 ರನ್ನುಗಳ ವಿಜಯದ ಗುರಿ ಬೆನ್ನತ್ತಿದ ರೋಹಿತ್ ಬಳಗ 18.5 ಓವರ್ಗಳಲ್ಲಿ ಗುರಿ ತಲುಪಿತು. ಆರಂಭಿಕರಾದ ರೋಹಿತ್ ಶರ್ಮ (40), ಇಶಾನ್ ಕಿಶನ್(35) ಮೊದಲ ವಿಕೇಟಿಗೆ 64 ರನ್ನುಗಳ ಜತೆಯಾಟ ನಡೆಸಿ ಭದ್ರ ಬುನಾದಿ ಹಾಕಿ ಕೊಟ್ಟರು. ವಿರಾಟ್ ಕೊಹ್ಲಿ, ರಿಷಬ್ ಪಂತ್ ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡ ಭಾರತಕ್ಕೆ ಮಾಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್ ಹಾಗು ವೆಂಕಟೇಶ್ ಅಯ್ಯರ್ ಆಸರೆಯಾದರು. ಹೊಡಿಬಡಿ ಆಟವಾಡಿದ ಈ ಇಬ್ಬರೂ ಭಾರತದ ಗೆಲುವನ್ನು ಸುಲಭವಾಗಿಸಿದರು. 18 ಬಾಲುಗಳಿಂದ 34 ರನ್ ಗಳಿಸಿದ ಸೂರ್ಯಕುಮಾರ್ ತಾನೊಬ್ಬ ಫಿನಿಶರ್ ಅನ್ನೋದನ್ನು ಸಾಬೀತು ಮಾಡಿದರು. ಸಾಥ್ ನೀಡಿದ ವೆಂಕಟೇಶ್ ಅಯ್ಯರ್ 13 ಬಾಲುಗಳಲ್ಲಿ 24 ರನ್ ಗಳಿಸಿದರು.
ರವಿ ಬಿಶ್ನೋಯಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.












































