
ಮುಂಬೈ: ಐಪಿಎಲ್ 15ನೇ ಆವೃತ್ತಿಯು ಶನಿವಾರ ಆರಂಭಗೊಂಡಿದ್ದು 2022 ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರು ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದ ಕೆಕೆಆರ್ ತಂಡ ಶುಭಾರಂಭ ಮಾಡಿದೆ.
ಮುಂಬಯಿಯ ವಾಖೆಂಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಒಂದು ಹಂತದಲ್ಲಿ ನೂರು ರನ್ ದಾಟುವುದೂ ಕಷ್ಟವಾಗಿದ್ದ ಸ್ಥಿತಿಯಲ್ಲಿದ್ದ ಚೆನ್ನೈ ತಂಡಕ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಆಸರೆಯಾಗಿ ನಿಂತರು. ಆರಂಭದಲ್ಲಿ ವಿಕೆಟ್ ಉರುಳದಂತೆ ರಕ್ಷಣಾತ್ಮಕ ಆಟವಾಡಿದ ಧೋನಿ ಕೊನೆಗೆ ಸಿಡಿದು ನಿಂತರು. ಆಕರ್ಷಕ ಅರ್ಧ ಶತಕ ದಾಖಲಿಸಿದ ಧೋನಿ ತನ್ನ ಫಾರ್ಮ್ ಮರಳಿಕೆಯನ್ನು ಭರ್ಜರಿಯಾಗಿಯೇ ಪ್ರದರ್ಶಿಸಿದರು. 2019ರಲ್ಲಿ ಆರ್.ಸಿ.ಬಿ ಎದುರು ನಡೆದಿದ್ದ ಐಪಿಎಲ್ ನಲ್ಲಿ ಧೋನಿ 84 ರನ್ ಗಳಿಸಿದ್ದರು. ಆ ಬಳಿಕ ಐಪಿಎಲ್ ನಲ್ಲಿ ದಾಖಲಾದ ಮೊದಲ ಅರ್ಧ ಶತಕ ಇದಾಗಿದೆ. ಧೋನಿ ಅವರ 50 ರನ್ ನೆರವಿನಿಂದ ಚೆನ್ನೈ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ಶಕ್ತವಾಯಿತು.
ಚೆನ್ನೈ ಪರ ಧೋನಿ 50, ರಾಬಿನ್ ಉತ್ತಪ್ಪ 28, ಹಾಗೂ ನಾಯಕ ರವೀಂದ್ರ ಜಡೇಜಾ 26 ರನ್ ಗಳಿಸಿದರು. ಕೆಕೆಆರ್ ಪರ ಉಮೇಶ್ ಯಾದವ್ 2, ವರುಣ್ ಚಕ್ರವರ್ತಿ ಹಾಗೂ ಆಂಡ್ರೆ ರಸೆಲ್ ತಲಾ 1 ವಿಕೆಟ್ ಕಬಳಿಸಿದರು. ಗುರಿ ಬೆನ್ನತ್ತಿದ ಶ್ರೇಅಯಸ್ ಅಯ್ಯರ್ ನಾಯಕತ್ವದ ಕೆಕೆಆರ್ 18.3 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಗೆಲುವಿನ ಶುಭಾರಂಭ ಮಾಡಿತು.