Coastal

ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಜಗಳ, ಗಂಡನ ಬಡಿಗೆಯ ಏಟಿಗೆ ಪತ್ನಿ ಖಲಾಸ್

ಉಳ್ಳಾಲ: ಗಂಡ ಹೆಂಡಿರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರು ಉಳ್ಳಾಲದ ಕುಂಪಲ ಚೇತನ ನಗರದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಇದೊಂದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತಿರಾಯ ಆಸ್ಪತ್ರೆಯಲ್ಲಿ ಶವ ಮಹಜರು ಬಳಿಕ ಸತ್ಯ ಗೊತ್ತಾಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಕುಂಪಲ ಚೇತನ ನಗರದ ನಿವಾಸಿ ಜೋಸೆಫ್ ಫ್ರಾನ್ಸಿಸ್ (54) ಹೆಂಡತಿಯ ಕೊಲೆ ಮಾಡಿದ ವ್ಯಕ್ತಿ. ಮೇ ೧೧ ರಂದು ಮನೆಯಲ್ಲಿ ಜೋಸೆಫ್ ಹಾಗು ಆತನ ಹೆಂಡತಿ ಶೈಮಾ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಜಗಳದ ಮಧ್ಯೆ ಜೋಸೆಫ್ ಶೈಮಾಳ ತಲೆಗೆ ಬಡಿಗೆಯಿಂದ ಹೊಡೆದಿದ್ದಾನೆ. ಏಟಿನ ರಭಸಕ್ಕೆ ನೆಲಕ್ಕುರುಳಿದ ಶೈಮಾ ಗಂಭೀರ ಸ್ಥಿತಿಯಲ್ಲಿದ್ದರು. ಒಂದು ವೇಳೆ ಆಕೆ ಸತ್ತರೆ ಆತ್ಮಹತ್ಯೆ ಎಂದು ತಿಳಿಯಲಿ ಎಂದು ಆಕೆಗೆ ವಿಷವನ್ನು ಕೂಡ ಕುಡಿಸಿದ್ದ ಪಾಪಿ ಪತಿರಾಯ. ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಅದೇ ದಿನ ರಾತ್ರಿ ಸಾವಿಗೀಡಾಗಿದ್ದರು.

ಮಗಳ ಸಾವಿನ ಬಗ್ಗೆ ಅನುಮಾನಗೊಂಡ ಶೈಮಾ ಅವರ ತಂದೆ ಕೇರಳ ಮೂಲದ ಜೋಸೆಫ್ ಎಂಬವರು ಈ ಬಗ್ಗೆ ತನಿಖೆ ನಡೆಸುವಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಆ ಆಧಾರದಲ್ಲಿ ಪೊಲೀಸರು ಜೋಸೆಫ್ ಫ್ರಾನ್ಸಿಸ್ ನನ್ನ ವಿಚಾರಣೆ ನಡೆಸಿದ್ದರು. ಆದರೆ ಆತ ಆಕೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದೇ ಹೇಳುತ್ತಿದ್ದ. ಆದರೆ ಶನಿವಾರ ಶೈಮಾ ಶವಮಹಜರು ವರದಿ ಬಂದಿದ್ದು ಅದರಲ್ಲಿ ತಲೆಗೆ ಬಲವಾದ ಹೊಡೆತ ಬಿದ್ದಿದೆ ಎಂಬುದು ಉಲ್ಲೇಖವಾಗಿತ್ತು. ಕೂಡಲೇ ಪೊಲೀಸರು ಕೊಲೆ ಪ್ರಕರಣದಡಿ ಜೋಸೆಫ್ ನನ್ನ ಬಂಧಿಸಿದ್ದಾರೆ. ಜೋಸೆಫ್ ಶೈಮಾ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು ವ್ಯಾಸಂಗ ಮಾಡುತ್ತಿದ್ದಾರೆ. ಕೊಲೆ ನಡೆದ ದಿನ ಮನೆಯಲ್ಲಿಯೇ ಇದ್ದ ಮಕ್ಕಳು ತಂದೆ ಸಿಕ್ಕಿಬೀಳುತ್ತಾರೆ ಎಂಬ ಭಯಕ್ಕೆ ಕೊಲೆ ವಿಷಯವನ್ನು ಮರೆಮಾಚಿದ್ದರು ಎನ್ನಲಾಗಿದೆ.

ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd

Exit mobile version