
ಮಂಗಳೂರು: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಗೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಸುರತ್ಕಲ್ಲಿನಲ್ಲಿ ಫಾಜಿಲ್ ನನ್ನ ಹತ್ಯೆ ಮಾಡಲಾಯಿತು ಎಂದು ವಿಹೆಚ್ ಪಿ ಮುಖಂಡ ಶರಣ್ ಪಂಪ್ ವೆಲ್ ನೀಡಿದ ಹೇಳಿಕೆ ಕಾವೇರಿದ ಬೆನ್ನಲ್ಲೇ ಇದೀಗ ಅದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಶಾಸಕ ಭರತ್ ಶೆಟ್ಟಿ ಫಾಜಿಲ್ ಗೆ ಪರಿಹಾರ ಕೊಡಬೇಕು ಎಂದು ಹೇಳಿದ್ದಾರೆ.
ಬೇರೆಯವರಿಗೆ ಸಿಕ್ಕಂತೆ ಫಾಜಿಲ್ ಗೂ ಕೂಡ ಸರ್ಕಾರದಿಂದ ಪರಿಹಾರ ಸಿಗಬೇಕು. ದಕ್ಷಿಣ ಕನ್ನಡ ಜಿಲ್ಲಾಡಳಿತ ಫಾಜಿಲ್ ಕುಟುಂಬದವರಿಗೆ ಪರಿಹಾರ ನೀಡುವುದಕ್ಕೆ ವಿನಂತಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಮಂಗಳೂರು ಉತ್ತರ ಕ್ರೇತ್ರದ ಶಾಸಕ ಭರತ್ ಶೆಟ್ಟಿ ಹೇಳಿದರು. ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನಲೆಯಲ್ಲಿ ಶಾಸಕರ ಈ ಹೇಳಿಕೆ ಬಂದಿರುವುದು ಕುತೂಹಲ ಮೂಡಿಸಿದೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡುತ್ತಾ ಫಾಜಿಲ್ ಅವರ ಕುಟುಂಬ ಸದಸ್ಯರನ್ನು ಒಬ್ಬ ಶಾಸಕರಾಗಿ ಯಾಕೆ ಭೇಟಿ ಮಾಡಲಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಸಕ ಭರತ್ ಶೆಟ್ಟಿ, “ಆ ಪರಿಸ್ಥಿತಿಯಲ್ಲಿ ಸ್ಥಳದಲ್ಲಿ ಉದ್ವಿಗ್ನತೆ ಹೆಚ್ಚಿರುತ್ತದೆ ಹಾಗೂ ಅದನ್ನು ಮತ್ತಷ್ಟು ಉಲ್ಬಣಗೊಳಿಸಬಾರದೆಂಬ ಕಾರಣದಿಂದ ತಾವು ಆ ಸಂದರ್ಭದಲ್ಲಿ ಫಾಜಿಲ್ ಮನೆಗೆ ಭೇಟಿ ನೀಡಲಿಲ್ಲ” ಎಂದು ಸಮಜಾಯಿಷಿ ನೀಡಿದ್ದಾರೆ.