
ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾದ ಕಾರಿನಲ್ಲಿ ಜೋಡಿ ಮೃತ ದೇಹ ಇಂದು ಬೆಳಗ್ಗೆ (ಭಾನುವಾರ) ಪತ್ತೆಯಾಗಿದೆ. ಮಂದಾರ್ತಿ ಬಳಿಯ ಹೆಗ್ಗುನ್ಜೆ ಪಂಚಾಯಿತಿ ವ್ಯಾಪ್ತಿಯ ಕೊತ್ತೂರು ಎಂಬ ನಿರ್ಜನ ಪ್ರದೇಶದ ರಸ್ತೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿದ್ದು ಕಾರಿನಲ್ಲಿ ಎರಡು ಮೃತ ದೇಹಗಳು ಕಂಡು ಬಂದಿವೆ.
ಭಾನುವಾರ ಬೆಳಗಿನ ಜಾವ ಸುಮಾರು 3:30ರ ಹೊತ್ತಿಗೆ ಬೆಂಕಿ ಉರಿಯುವುದನ್ನು ಕಂಡು ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೋಡಿದಾಗ ಕಾರು ಬೆಂಕಿಯಲ್ಲಿ ಉರಿಯುತ್ತಿತ್ತು. ಮತ್ತು ಕಾರಿನಲ್ಲಿ ಎರಡು ದೇಹಗಳು ಕೂಡ ಬೆಂಕಿಯಲ್ಲಿ ಬೆಂದು ಉರಿಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಬೆರಳಚ್ಚು ತಜ್ಞರು ಕೂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾರಾದರೂ ಕೊಲೆ ಮಾಡಿ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿ ಹೋಗಿದ್ದಾರೆಯೇ ಅಥವಾ ಅಚಾನಕ್ಕಾಗಿ ಕಾರಿಗೆ ಬೆಂಕಿ ಹತ್ತಿಕೊಂಡು ಕಾರಿನೊಳಗಿದ್ದವರು ಬೆಂಕಿಗೆ ಆಹುತಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆಯಿಂದ ತಿಳಿದು ಬರಬೇಕಿದೆ.